ಕುಷ್ಟಗಿ: ಕೊಪ್ಪಳ ಏತ ನೀರಾವರಿ ಮತ್ತು ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಗುತ್ತಿಗೆದಾರರನ್ನು ಸಚಿವ ಹಾಲಪ್ಪ ಆಚಾರ ಅವರು ಗುರುವಾರ ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಕಲಾಲಬಂಡಿ ಗ್ರಾಮದ ಬಳಿ ಮೊದಲ ಹಂತದಲ್ಲಿ ನಿರ್ಮಾಣಗೊಂಡಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು ಸ್ಥಳದಲ್ಲಿದ್ದ ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರಹಾಕಿದರು.
ಎರಡನೇ ಹಂತದಲ್ಲಿ ರೈತರ ಜಮೀನುಗಳಿಗೆ ನೀರು ಹರಿಸುವ ನಿಟ್ಟಿನಲ್ಲಿ ನಡೆಯಬೇಕಿರುವ ಕೆಲಸ ಕಾಮಗಾರಿಗಳ ಪರಿಶೀಲನೆ ನಡೆಸಿದ ಅವರು ನಂತರ ಇಳಕಲ್ ತಾಲ್ಲೂಕನ ಬಲಕುಂದಿ ಬಳಿ ನಿರ್ಮಾಣಗೊಂಡಿರುವ ಜಲಸಂಗ್ರಹಗಾರಕ್ಕೂ ಭೇಟಿ ನೀಡಿ ಪರಿಶಿಲಿಸಿದರು.
ನಂತರ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ ಸಚಿವ ಹಾಲಪ್ಪ ಆಚಾರ, ಏತ ನೀರಾವರಿ ಹಾಗೂ ಕೆರೆ ತುಂಬಿಸುವುದಕ್ಕೆ ಮುಂದಿನ ಹಂತದ ಕೆಲಸಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವ ನಿಟ್ಟಿನಲ್ಲಿ ತುರ್ತು ಕ್ರಮ ತೆಗೆದುಕೊಳ್ಳಬೇಕಿದ್ದು ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಗುರುವಾರ ಸಭೆ ನಡೆಸಲಾಗಿದೆ.
ಏ.9 ಶನಿವಾರವಾಗಿದ್ದರೂ ಬೆಂಗಳೂರಿನಲ್ಲಿ 3 ಗಂಟೆಗೆ ಬೃಹತ್ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿದ್ದು ಏತ ನೀರಾವರಿ ಕಾಮಗಾರಿ ವಿಳಂಬ ಮತ್ತು ಮುಂದೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತ ಚರ್ಚಿಸಲಾಗುತ್ತದೆ ಎಂದರು.
ಈಗಾಗಲೇ ಇಳಕಲ್ ತಾಲ್ಲೂಕಿನ ಬಲಕುಂದಿ ಬಳಿ ಜಲ ಸಂಗ್ರಹಗಾರಕ್ಕೆ ನೀರು ಬಂದಿದೆ. ಅಲ್ಲಿಂದ ಕಲಾಲಬಂಡಿಗೆ ಬರಬೇಕು ಕೆಲವು ಕಡೆದ ಮುಖ್ಯಕೊಳವೆಯಲ್ಲಿ ಸೋರಿಕೆ ಕಂಡುಬಂದಿದ್ದು ದುರಸ್ತಿ ನಡೆಯುತ್ತಿದೆ. ದುರಸ್ತಿ ನಂತರ ಐದಾರು ದಿನಗಳಲ್ಲಿ ನೀರು ಕಲಾಲಬಂಡಿ ಬಳಿ ಇರುವ ತೊಟ್ಟಿಗೆ ಬಂದು ಬೀಳಲಿದೆ. ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಕೆರೆ ತುಂಬಿಸುವ ಯೋಜನೆ ತಮ್ಮ ಕನಸಿನಕೂಸಾಗಿದ್ದು ಆದ್ಯತೆ ನೀಡಲಾಗುವುದು ಎಂದು ವಿವರಿಸಿದರು.