ಕನಕಗಿರಿ: ಕೆ. ಕಾಟಾಪುರ ಕೆರೆಯಿಂದ ಶಿರಿವಾರ ಹಾಗೂ ಕರಡೋಣ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿ ಮುಗಿದಿದೆ. ಇನ್ನೂ 10 ದಿನದೊಳಗೆ ಪೈಪ್ಲೈನ್ ಮೂಲಕ ಕೆರೆಗಳಿಗೆ ನೀರು ಸರಬರಾಜು ಮಾಡಲಾಗುವುದು ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದರು.
ಸಮೀಪದ ಕೆ. ಕಾಟಾಪುರದ ಕೆರೆಗೆ ಸೋಮವಾರ ಭೇಟಿ ನೀಡಿ ನಂತರ ಮಾತನಾಡಿದರು. ತುಂಗಾಭದ್ರಾ ಕಾಲುವೆಯಿಂದ ಪೈಪ್ಲೈನ್ ಮೂಲಕ ಕಾಟಾಪುರ ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು ಮತ್ತೆ ಶಿರಿವಾರ, ಕರಡೋಣ ಗ್ರಾಮದ ಕೆರೆಗಳಿಗೆ ಪೂರೈಕೆ ಮಾಡಲಾಗುವುದು, ನೀರು ಪೂರೈಕೆಗೆ ವಿದ್ಯುತ್ ಸಂಪರ್ಕ ಸೇರಿದಂತೆ ಇತರ ತಾಂತ್ರಿಕ ಸಮಸ್ಯೆ ಇದ್ದ ಕಾರಣ ಅದು ಈಗ ಬಗೆಹರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕೆರೆಗಳಿಗೆ ನೀರು ಭರ್ತಿ ಮಾಡುವುದರಿಂದ ಗೋಡಿನಾಳ, ಹಿರೇಖೇಡ ಸೇರಿ ಇತರ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದ್ದು, ಕೃಷಿ, ವಾಣಿಜ್ಯ ಕ್ಷೇತ್ರ ಅಭಿವೃದ್ದಿ ಕಾಣಲಿದೆ ಎಂದು ತಿಳಿಸಿದರು. ಕಾರಟಗಿ ಪುರಸಭೆ ಸದಸ್ಯ ತಿಮ್ಮನಗೌಡ, ಪ್ರಮುಖರಾದ , ಮೋಹನರಾವ್ ಹಾಗೂ ಬಸವರಾಜ ಹುಳ್ಕಿಹಾಳ ಇತರರು ಇದ್ದರು.