ಗಂಗಾವತಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಅಪೌಷ್ಟಿಕ ಮಕ್ಕಳ ಚಿಕಿತ್ಸಾ ಶಿಬಿರ ನಡೆಯಿತು.
ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಲಕ್ಷ್ಮಿದೇವಿ ಗೋಟೂರು ಮಾತನಾಡಿ,‘ಅಪೌಷ್ಟಿಕತೆ ನಿವಾರಣೆ ಮಾಡುವ ಉದ್ದೇಶದಿಂದ ಮಗು ತಾಯಿಯ ಗರ್ಭದಲ್ಲಿ ಇರುವಾಗಲೇ ಪೌಷ್ಟಿಕ ಆಹಾರ ಸಾಮಗ್ರಿ ನೀಡಲಾಗುತ್ತದೆ. ಜನನದ ಬಳಿಕ ಮಗುವಿನ ಬೆಳವಣಿಗೆಗೆ ಅನುಗುಣವಾಗಿ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.
‘ಇದೆಲ್ಲದರ ನಂತರದಲ್ಲಿ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಂಡು ಬಂದರೆ ಅಂಥ ಮಕ್ಕಳಿಗೆ ಇಲಾಖೆ ವತಿಯಿಂದ ವೈದ್ಯರ ಸಲಹೆಯಂತೆ ಚಿಕಿತ್ಸೆ ಕೊಡಿಸಿ, ಉಚಿತ ಔಷಧವನ್ನೂ ವಿತರಣೆ ಮಾಡಲಾಗುತ್ತದೆ. ಸದ್ಯ ಗ್ರಾಮೀಣ ಭಾಗದ 42 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು ಹೇಳಿದರು.
ಡಾ.ಶ್ರೀಕಾಂತ, ಅಂಗನವಾಡಿ ಮೇಲ್ವಿಚಾರಕಿ ಸಾವಿತ್ರಿ, ಹುಸೇನಮ್ಮ, ಪದ್ಮಾವತಿ ಹಾಗೂ ಗುರುಲಿಂಗಮ್ಮ ಇದ್ದರು.