ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಮೂಲ ರಾಜಧಾನಿಯಾದ ಆನೆಗೊಂದಿ ಮತ್ತು ಹಂಪಿ ಸುತ್ತಮುತ್ತಲಿನ ಭಾಗದಲ್ಲಿ ಸ್ಮಾರಕಗಳು ಹೇರಳವಾಗಿದ್ದು, ಅವುಗಳ ಸಂರಕ್ಷಣೆಯ ಕೆಲಸ ಆಗಬೇಕು ಎಂದು ಬಳ್ಳಾರಿಯ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಹೇಳಿದರು.
ಗಂಗಾವತಿಯ ಪರಿಸರ ಸೇವಾ ಟ್ರಸ್ಟ್ ತಾಲ್ಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದಲ್ಲಿ ಆಯೋಜಿಸಿದ್ದ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಐತಿಹಾಸಿಕ ಸ್ಥಳಗಳಾದ ಆನೆಗೊಂದಿ, ಹಂಪೆಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ಕೊಡುತ್ತಾರೆ. ಇಂಥ ಸ್ಥಳಗಳಲ್ಲಿ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಹಾಗೂ ಪರಿಸರ ಸೇವಾ ಟ್ರಸ್ಟ್ನ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ ಮಾದರಿ ಕಾರ್ಯಕ್ರಮ ಎಂದರು.
ನಂತರ ಲೇಖಕ ಮಂಜುನಾಥ ಗುಡ್ಲಾನೂರ ಮಾತನಾಡಿ, ‘ಹಿರೇಬೆಣಕಲ್ನ ಬೆಟ್ಟದಲ್ಲಿರುವ ಮೋರೆರ ಶಿಲಾ ಕೋಣೆಗಳು ಮತ್ತು ಗವಿವರ್ಣ ಚಿತ್ರಗಳನ್ನೊಳಗೊಂಡಂತೆ ನಮ್ಮ ಪೂರ್ವಜರು ಬದುಕಿ ಬಾಳಿದ ಈ ಸ್ಥಳಗಳು ಐತಿಹಾಸಿಕ ಮೌಲ್ಯಗಳಾಗಿವೆ. ಮುಂದಿನ ಪೀಳಿಗೆಗೆ ಇವುಗಳನ್ನು ಸಂರಕ್ಷಿಸಿ ಬಿಟ್ಟು ಹೋಗುವ ಜವಾಬ್ದಾರಿ ನಮ್ಮದು. ಈ ಭಾಗದಲ್ಲಿನ ಸ್ಮಾರಕ ಮತ್ತು ಐತಿಹಾಸಿಕ ಕುರುಹುಗಳ ರಕ್ಷಣೆಗೆ ಎಲ್ಲರೂ ಕೈ ಜೋಡಿಸಬೇಕು’ ಎಂದರು.
ಬಳ್ಳಾರಿ ಉಪವಿಭಾಗಾಧಿಕಾರಿ ರಮೇಶ ಕೋನರೆಡ್ಡಿ, ಬಳ್ಳಾರಿ ವಲಯ ಗುಪ್ತದಳದ ಬಿ.ಎಸ್.ತಳವಾರ, ಹಾಸ್ಯ ಕಲಾವಿದ ಡಾ.ಬಸವರಾಜ ಬೆಣ್ಣಿ, ಪ್ರಮುಖರಾದ ಗಂಗಾಧರ, ಮಂಜುಳಾ, ಡಾ.ವಿಶ್ವನಾಥ, ಮಂಜುನಾಥ ಶಾನಭೋಗ, ಎಲ್.ಡಿ.ಜೋಷಿ, ಈರಣ್ಣ ಪೂಜಾರ ಹಾಗೂ ಯಮನೂರ ನಾಯಕ ಇದ್ದರು.