ಗಂಗಾವತಿ: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಭವನದ ಆವ ರಣದಲ್ಲಿ ಶನಿವಾರ ಸಮಾನ ಮನಸ್ಕರಿಂದ ಗಂಗಾವತಿಯ ನ್ನ ಕಿಷ್ಕಿಂಧೆ ಜಿಲ್ಲೆಯನ್ನಾಗಿಸುವ ಕುರಿತು ವಿಶೇಷ ಸಭೆ ನಡೆಸಲಾಯಿತು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಗಂಗಾವತಿ ರಾಜಕೀಯ, ಆರ್ಥಿಕ, ಸಾಮಾಜಿಕ, ಭೌಗೋಳಿಕವಾಗಿ ಪ್ರತಿಷ್ಠಿತ ಸ್ಥಿತಿಯಲ್ಲಿ ಕಿಷ್ಕಿಂದೆ ಜಿಲ್ಲೆಯನ್ನಾಗಿ ಮಾಡಲು ಆರ್ಹತೆ ಹೊಂದಿದೆ. ಕ್ಷೇತ್ರದ ಜನರು ಎಲ್ಲ ಒಟ್ಟುಗೂಡಿ, ಪಕ್ಷಾತೀತವಾಗಿ ಹೋರಾಟ ನಡೆಸಿದರೆ, ಫಲ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ ಮಾತನಾಡಿ, ಅಂಜನಾದ್ರಿ ವಿಶ್ವವಿಖ್ಯಾತಿಯಾಗಿದೆ. ಇಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸ ಸಾರುವ ಅನೇಕ ಕುರುಹುಗಳಿವೆ. ಹಿಂದೆಯೇ ಗಂಗಾವತಿ ಜಿಲ್ಲೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ. ಈ ಬಾರಿ ಉಗ್ರ ಹೋರಾಟ ನಡೆಸಿ, ಸರ್ಕಾರದ ಗಮನಕ್ಕೆ ತಂದು ಜಿಲ್ಲೆ ರಚನೆಗೆ ಶ್ರಮಿಸಬೇಕು ಎಂದರು.
ವಿದ್ಯಾನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, ಗಂಗಾವತಿ ಜಿಲ್ಲೆಯಾದರೆ ಭತ್ತ ಉತ್ಪನ್ನ ಮಾರಾಟ ಮಂಡಳಿ, ಮಾರುಕಟ್ಟೆ, ಉದ್ಯೋಗ ಸೃಷ್ಟಿಯಾಗಲಿ ದ್ದು, ಎಲ್ಲ ವರ್ಗದವರನ್ನು ಒಳಗೊಂಡ ಹೋರಾಟ ಸಮಿತಿ ರಚಿಸಿ, ಜಿಲ್ಲೆಗಾಗಿ ಹೋರಾಟ ನಡೆಸಬೇಕೆಂದು ಮನದಾಳದ ಮಾತು ತಿಳಿಸಿದರು.
ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಮಾತನಾಡಿ, ಗಂಗಾವತಿ ಕಿಷ್ಕಿಂದಾ ಜಿಲ್ಲೆಯನ್ನಾಗಿಸಲು ಕಂಪ್ಲಿ, ತಾವರಗೇರಾ, ಕನಕಗಿರಿ, ಕಾರಟಗಿ, ಸಿಂಧನೂರು ತಾಲ್ಲೂಕಿನ ಜನರು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆ ರಚನೆಗೆ ಹೋರಾಟ ನಡೆಸಬೇಕು. ಜತೆಗೆ ಕೊಪ್ಪಳ ಜಿಲ್ಲೆಯ ತಾವರಗೇರಾ, ಹನುಮಸಾಗರ ತಾಲ್ಲೂಕುಗಳಾಗಬೇಕು ಎಂದು ಅಭಿಪ್ರಾಯ ಹಂಚಿಕೊಂಡರು.
ಇತಿಹಾಸ ಸಂಶೋಧಕ ಶರಣಬಸಪ್ಪ ಕೋಲ್ಕಾರ ಮಾತನಾಡಿ, ಕಿಷ್ಕಿಂದಾ ಜಿಲ್ಲೆ ರಚನೆಗೆ ಮೊದಲ ಹಂತದಲ್ಲಿ ಬೃಹತ್ ಪ್ರತಿಭಟನೆ, ರ್ಯಾಲಿ, ಜಾಗೃತಿ ಜಾಥಾಗಳು ನಡೆಸಿ, ಸರ್ಕಾರದ ಗಮನ ಸೆಳೆದು, ಸಂಘ-ಸಂಸ್ಥೆ, ಎಲ್ಲ ವ್ಯಾಪಾರಸ್ಥರ, ಬುದ್ಧಿಜೀವಿಗಳ, ಯುವಜನರು, ಸಾರ್ವಜನಿಕರ ಸಹಕಾರ ಪಡೆದು ತೀವ್ರ ಹೋರಾಟ ನಡೆಸಿದಾಗ ಯಶಸ್ಸು ಸಿಗುತ್ತದೆ ಎಂದರು.
ರಾಜವಂಶಸ್ಥೆ ಲಲಿತಾ ರಾಣಿ ಶ್ರೀರಂಗದೇವರಾಯಲು, ಎಚ್.ಎಂ. ಶೈಲಜಾ, ಮನೋಹರಗೌಡ ಹೇರೂರ, ಜೆ.ಚನ್ನಬಸವ, ರಾಜೇಶ ರೆಡ್ಡಿ, ಪವನ ಕುಮಾರ, ಜೋಗದ ಹನುಮಂತಪ್ಪ ನಾಯಕ, ಚನ್ನಬಸಯ್ಯ ಸ್ವಾಮಿ, ದೊಡ್ಡಪ್ಪ ದೇಸಾಯಿ, ಶರಣೇಗೌಡ ಮಾಲಿ ಪಾಟೀಲ, ಜಗನ್ನಾಥ ಆಲಂಪಲ್ಲಿ, ಎಂ.ಮಂಜುನಾಥ, ಶ್ರೀನಿವಾಸ ಅಂಗಡಿ, ಮಂಜುನಾಥ ಕಟ್ಟಿಮನಿ, ಪಂಪಣ್ಣ ನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.