ಯಲಬುರ್ಗಾ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಬೆಳೆದಿರುವ ಹೆಸರು ಮತ್ತು ಶೇಂಗಾ ಬೆಳೆಗೆ ಹಸಿರು ಎಲೆ ರೋಗ ಹಾಗೂ ಇನ್ನಿತರ ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ರೈತರಿಗೆ ಸಲಹೆ ನೀಡಿದ್ದಾರೆ.
ತಾಲ್ಲೂಕಿನ ಬಂಡಿಹಾಳ, ತೊಂಡಿಹಾಳ, ಕುಕನೂರು ತಾಲ್ಲೂಕಿನ ಯರೇಹಂಚಿನಾಳ, ಸೋಂಪುರ, ಮನ್ನಾಪುರ ಸೇರಿ ಅನೇಕ ಗ್ರಾಮಗಳಿಗೆ ಭೇಟಿ ನೀಡಿದ ಕೃಷಿ ವಿಜ್ಞಾನಿಗಳು, ರೋಗ ಹರಡುವಿಕೆ ಬಗ್ಗೆ ಪರಿಶೀಲಿಸಿದರು.
ಬೆಳೆಗಳು ಪೋಷಕಾಂಶಗಳ ಕೊರತೆಯಿಂದಾಗಿ ಕಾಯಿಲೆಗೆ ತುತ್ತಾಗುತ್ತಿವೆ. ಸೂಕ್ತ ಉಪಚಾರದಿಂದ ರೋಗ ನಿಯಂತ್ರಿಸಲು ಸಾಧ್ಯವಿದೆ. ತ್ವರಿತವಾಗಿ ರೈತರು ನಿಗದಿತ ಪ್ರಮಾಣದಲ್ಲಿ ಕೀಟನಾಶಕ ಸಿಂಪಡಿಸಬೇಕು ಎಂದು ವಿಜ್ಞಾನಿಗಳು ಸಲಹೆ ನೀಡಿದರು.
ಒಂದು ಲೀಟರ್ ನೀರಿಗೆ 0.2 ಗ್ರಾಂ ಇಮಾಮೆಟ್ಟಿನ ಬೆಂಜೋಯೇಟ್ ಅಥವಾ 0.5 ಮಿಲಿಲ್ಯಾಮಮಡಾ ಸೈಲೂಥೀತ್ರಿ ಬೆರೆಸಿ ಸಿಂಪಡಿಸುವ ಮೂಲಕ ಕೀಟಬಾಧೆ ನಿಯಂತ್ರಣಕ್ಕೆ ತರಬಹುದು. ಹಾಗೆಯೇ ಲಘು ಪೋಷಕಾಂಶಗಳ ಕೊರತೆ ನೀಗಿಸಲು ಕಬ್ಬಿಣದ ಸಲ್ಪೇಟ್ 1 ಕೆ.ಜಿ. ಮತ್ತು 19.19.19 ಪ್ರತಿ ಎಕರೆಗೆ 1 ಕೆ.ಜಿ. ಯಷ್ಟು ಮೇಲುಗೊಬ್ಬರವಾಗಿ ಶೇಂಗಾ ಮತ್ತು ಹೆಸರು ಬೆಳೆಗೆ ಕೊಡಬೇಕು ಎಂದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ ನಾಗೇಶ ಬಸಪ್ಪ ಜನೆಕಲ್, ವಿಜ್ಞಾನಿ ಪ್ರದೀಪ್ ಬಿರಾದಾರ್ ಇದ್ದರು.