ಮಸಬಹಂಚಿನಾಳ (ಕುಕನೂರು): ಶಾಲೆ ಎಂದರೆ ಬರೀ ಓದು ಬರಹ, ಪಾಠ ಅಷ್ಟೆ ಅಲ್ಲ. ಸದೃಢತೆಗೆ ಆಟ, ಸುತ್ತಮುತ್ತ ಉತ್ತಮ ವಾತಾವರಣದ ಮಹತ್ವ ತಿಳಿಸುವ ಸಲುವಾಗಿ ಇಲ್ಲೊಂದು ಸರ್ಕಾರಿ ಶಾಲೆಯ ಆವರಣದಲ್ಲಿ ನರೇಗಾ ಯೋಜನೆಯಡಿ ಅಂದಾಜು ₹35 ಸಾವಿರ ವೆಚ್ಛದಲ್ಲಿ ಪೌಷ್ಟಿಕ ತೋಟ ನಿರ್ಮಿಸಲಾಗಿದೆ.
ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಕಳೆದ 20 ವರ್ಷಗಳ ಹಿಂದೆ ಆರಂಭವಾಗಿದ್ದ ಗೌರಮ್ಮ ಬಸಪ್ಪ ಆಚಾರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಆವರಣದಲ್ಲಿ 40 ಜನ ಅಕುಶಲ ಕೂಲಿ ಕಾರ್ಮಿಕರು ತೋಟ ನಿರ್ಮಿಸಿದ್ದಾರೆ. ಈಗ ಶಾಲೆ ಮೈದಾನ ಹಸಿರಿನಿಂದ ಕಂಗೊಳಿಸುತ್ತಿದೆ.
ಈ ಕಟ್ಟಡವನ್ನು ಸಚಿವ ಹಾಲಪ್ಪ ಆಚಾರ ಅವರು ತಮ್ಮ ತಾಯಿಯ ಹೆಸರಿನಲ್ಲಿ ದಾನ ಮಾಡಿದ್ದಾರೆ. 5 ಎಕರೆ ಪ್ರದೇಶದಲ್ಲಿ 10 ಕಟ್ಟಡಗಳು ತಲೆ ಎತ್ತಿವೆ.
ಇದರ ಸುತ್ತ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ತಡೆಗೋಡೆಗೆ ಹೊಂದಿಕೊಂಡು 200ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ.
ಅಲ್ಲದೇ ಉಳಿದ ಜಾಗದಲ್ಲಿ ತೋಟ ನಿರ್ಮಿಸಲಾಗಿದೆ. ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ₹35 ಸಾವಿರ ವೆಚ್ಚದಲ್ಲಿ ತೋಟ ತಲೆ ಎತ್ತಿದೆ. ವಿದ್ಯಾರ್ಥಿಗಳು ತೋಟದ ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ವರ್ಷ ತೋಟ ನಿರ್ಮಾಣ ಮಾಡಲಾಗಿದ್ದು, ಸಾಕಷ್ಟು ಅಭಿವೃದ್ಧಿಯಾಗಿದೆ.