ಕಾರಟಗಿ: ತಾಲ್ಲೂಕಿನ ನಾಗಕಲ್ನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಕೊರೊನಾ ಸೋಂಕಿತರು ಭಾನುವಾರ ಪ್ರತಿಭಟನೆ ನಡೆಸಿದರು.
‘ನಿರಂತರವಾಗಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಕೇಂದ್ರದಲ್ಲಿದ್ದ ಐದಾರು ಗ್ರಾಮಗಳ ಸೋಂಕಿತರು ಇದರ ಸಹವಾಸವೇ ಬೇಡ ಎಂದು ಮನೆಗೆ ತೆರಳುವ ವಿಫಲ ಯತ್ನ ನಡೆಸಿದ್ದರು. ಅಲ್ಲದೆ, ಇಲ್ಲಿಯ ಆಹಾರ ಸೇವಿಸಿ ಕೆಲವರು ವಾಂತಿ ಮಾಡಿಕೊಂಡಿದ್ದರು’ ಎಂದು ಸೋಂಕಿತರೊಬ್ಬರು ದೂರಿದರು.
ಕೇಂದ್ರದಲ್ಲಿ ಬೂದುಗುಂಪಾ, ಚಳ್ಳೂರು, ಸೋಮನಾಳ, ಚಳ್ಳೂರ ಕ್ಯಾಂಪ್, ಮೈಲಾಪುರ ಹಾಗೂ ತೊಂಡಿಹಾಳ ಕ್ಯಾಂಪ್ನ 20ಕ್ಕೂ ಹೆಚ್ಚು ಸೋಂಕಿತರಿದ್ದಾರೆ.
ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಕೇಂದ್ರದ ನಿರ್ವಹಣೆ ಮಾಡುತ್ತಿದ್ದಾರೆ.
‘ನಮ್ಮನ್ನು ಯಾರೂ ಕೇಳದಂತಾಗಿದೆ. ನರಕದಲ್ಲಿದ್ದ ಅನುಭವ ಆಗುತ್ತಿದೆ ಎಂದು ಕೆಲ ಸೋಂಕಿತರು ವಿವರಿಸಿ, ಇಲ್ಲಿಂದ ಯಾವಾಗ ಬಿಡುಗಡೆಯಾಗುತ್ತೇವೆಯೋ’ ಎಂದು ಆತಂಕದಿಂದ ಪ್ರತಿಕ್ರಿಯಿಸಿದರು.
ನಾಗನಕಲ್ ಗ್ರಾಮದಿಂದ ಪೂರೈಕೆಯಾಗುತ್ತಿದ್ದ ಊಟ ಚೆನ್ನಾಗಿತ್ತು. ಕಾರಟಗಿ ಖಾನಾವಳಿಯಿಂದ ಈಗ ಊಟ ಬರುತ್ತಿದ್ದು, ತೀರಾ ಕಳಪೆಯಾಗಿದೆ. ಇದೇ ರೀತಿ ಊಟ ನೀಡಿದರೆ ನಾವು ಹೊರಗೆ ಹೋಗುತ್ತೇವೆ ಎಂದು ಮೈಲಾಪುರ ಮತ್ತು ಬೂದುಗುಂಪಾ ಗ್ರಾಮದ ಸೋಂಕಿತರಿಬ್ಬರು ಎಚ್ಚರಿಕೆ ನೀಡಿದ್ದರು.
ಅಧಿಕಾರಿಗಳು ಬಂದು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ತಾಲ್ಲೂಕು ಪಂಚಾಯಿತಿ ಇಒ ಪ್ರತಿಕ್ರಿಯಿಸಿ,‘ಶುಕ್ರವಾರದಿಂದ ಸಂತ್ರಸ್ತರಿಗೆ ಕಳಪೆ ಗುಣಮಟ್ಟದ ಊಟ ಪೂರೈಕೆಯಾಗಿದ್ದು ಗಮನಕ್ಕೆ ಬಂದಿದೆ. ಊಟ ಪೂರೈಕೆ ಮಾಡುತ್ತಿರುವ ಕಾರಟಗಿ ಖಾನಾವಳಿಯವರಿಗೆ ಎಚ್ಚರಿಕೆ ನೀಡಲಾಗಿದೆ. ಸೋಮವಾರದಿಂದ ಉತ್ತಮ ಊಟ ಪೂರೈಕೆಯಾಗಿದೆ. ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.