ಕೊಪ್ಪಳ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯವಿವಿಯ 2021-22ನೇ ಸಾಲಿನಿಂದ ಕನ್ನಡ ಪಠ್ಯಕ್ಕೆ ಜಿಲ್ಲೆಯ ಮೂರು ಬರಹಗಾರರ ಕವನಗಳು ಆಯ್ಕೆಯಾಗಿವೆ.
ನಗರದ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ರವರ ‘ದೈವೀರಾಜ್ಯ’ ಎಂಬ ಕವನವು ಬಿ.ಕಾಂ, ಬಿ.ಬಿ.ಎಂ, ಬಿ.ಬಿ.ಎ, ಹಾಗೂ ಐ.ಎಂ.ಬಿ ದ್ವಿತೀಯ ಸೆಮಿಸ್ಟರ್ ಕನ್ನಡ ಬೇಸಿಕ್ ಪಠ್ಯಕ್ಕೆ ಆಯ್ಕೆಯಾಗಿದೆ.
ಶಿಕ್ಷಕ ಮಹೇಶ ಬಳ್ಳಾರಿಯವರ ‘ಹೋಟೆಲ್ದೊಳಗಿನ ಟೇಬಲ್’ ಎಂಬ ಕವನ ಬಿ.ಎ, ಬಿ.ಎಸ್.ಡಬ್ಲೂ ದ್ವಿತೀಯ ಸೆಮಿಸ್ಟರ್ ಪಠ್ಯಕ್ಕೆ ಆಯ್ಕೆಯಾಗಿದೆ ಹಾಗೂ ಕನಕಗಿರಿಯ ಉಪನ್ಯಾಸಕ ಇಮಾಮ್ಸಾಹೇಬ್ ಹಡಗಲಿಯವರ ‘ನಾಲ್ಕು ಗೋಡೆಗಳ ಮಧ್ಯೆ’ ಎಂಬ ಕವನ ಬಿ.ಎಸ್ಸಿ, ಬಿ.ಸಿ.ಎ., ಜಿ.ಎಂ.ಟಿ ದ್ವಿತೀಯ ಸೆಮಿಸ್ಟರ್ ಪಠ್ಯಕ್ಕೆ ಆಯ್ಕೆಯಾಗಿದೆ.
ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್ರವರು ಕೊಪ್ಪಳ ಜಲ್ಲೆಯ ಶಾಸನಗಳು ಮತ್ತು ಸಾಂಸ್ಕೃತಿಕ ಇತಿಹಾಸ, ಸಂಸಾರ ಸಗ್ಗ, ಮಾನ್ವಿ ತಾಲ್ಲೂಕಿನ ಇತಿಹಾಸ ಮತ್ತು ಸಂಸ್ಕೃತಿ, ಮಾನ್ವಿಯ ಮಹನೀಯರು,ತಾಲ್ಲೂಕಿನ ಗ್ಯಾಸೇಟಿಯರ್ ಮುಂತಾದ ಕೃತಿ ಪ್ರಕಟಿಸಿದ್ದಾರೆ.
ಮಹೇಶ ಬಳ್ಳಾರಿಯವರು ಸ್ಫೂರ್ತಿಯ ಸೆಲೆ, ಕಲ್ಲು ಲಿಂಗವಾದ ದಿನ, ಕಗ್ಗತ್ತಲು, ಮರ್ಮ, ಎಡವಿ ಬಿದ್ದ ದೇವರು ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇಮಾಮ್ ಸಾಹೇಬ್ ಹಡಗಲಿಯವರು ಮಿರ್ಜಾ ಗಾಲಿಬ್, ಅರಿಗೋಲು ಅಂಬಿಗ, ಕನಕಗಿರಿ ಜಾತ್ರೆ ಬಲು ಜೋರು, ಗಂಗಾಪುತ್ರ ಅಂಬಿಗರ ಚೌಡಯ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.
ಈ ಮೂರು ಕವಿಗಳ ಕವನಗಳು ವಿಶ್ವವಿದ್ಯಾಲಯದ ಪಠ್ಯಕ್ಕೆ ಆಯ್ಕೆಯಾಗಿರುವುದಕ್ಕೆ ಸಾಹಿತ್ಯ ಬಳಗ ಅಭಿನಂದಿಸಿದೆ.