ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಮಳೆ ಕೊರತೆಯಲ್ಲೂ ಉತ್ತಮ ಫಸಲು

ದಾಳಿಂಬೆ ಬೆಳೆದ ರೈತ ನಾದಿರ್ ಪಾಷ ಮುಲ್ಲಾ; ಶ್ರಮಕ್ಕೆ ಸಿಗದ ಬೆಲೆ
Last Updated 24 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ತಾವರಗೇರಾ: ಪಟ್ಟಣವು ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ಕೆಂಪು ಬಣ್ಣದ (ಕೇಸರ್) ದಾಳಿಂಬೆಗೆ ನಮ್ಮ ದೇಶ ಸೇರಿದಂತೆ ವಿದೇಶಗಳಲ್ಲಿಯೂ ಹೆಚ್ಚಿನ ಬೇಡಿಕೆ ಇದೆ.

ಕೆಲ ವರ್ಷಗಳಿಂದ ವಾತಾವರಣದ ವೈಪರಿತ್ಯದ ಪರಿಣಾಮ ಮತ್ತು ದಾಳಿಂಬೆ ಬೆಳೆ ಅಂಗಮಾರಿ ದುಂಡಾಣು ರೋಗಕ್ಕೆ ತುತ್ತಾಗಿ, ವಿದೇಶಕ್ಕೆ ಹೋಗುತ್ತಿದ್ದ ಹಣ್ಣುಗಳ ಪ್ರಮಾಣ ಇಳಿಮುಖ ಗೊಂಡಿದೆ. ಇದರ ಪರಿಣಾಮ ರೈತನು ಒಂದು ಎಕರೆಗೆ ಹಣ್ಣಿನ ಹೆಚ್ಚಿನ ಇಳುವರಿಗಾಗಿ ಖರ್ಚು ಮಾಡುತ್ತಿದ್ದ ಹಣಕ್ಕೆ ತಕ್ಕಷ್ಟು ಬೆಲೆ ಬರದೆ ಸಂಕಷ್ಟ ಅನುಭವಿದ್ದಾರೆ.

ಮಳೆ ಕೊರತೆ ನಡುವೆಯೂ ತಾವರಗೇರಾ ಪಟ್ಟಣದ ಗ್ರಾಮದ ರೈತ ನಾದಿರ್ ಪಾಷ ಅವರು, ದಾಳಿಂಬೆ ಬೆಳೆಯ ಉತ್ತಮ ಫಸಲು ಪಡೆಯುವ ಮೂಲಕ ಮಾದರಿ ರೈತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೊದಲು ತಮ್ಮ 11 ಎಕರೆ ಜಮೀನಿನಲ್ಲಿ ಜೋಳ, ಸಜ್ಜೆ, ಹೆಸರು, ತೊಗರೆ ಹಾಕುತ್ತಿದ್ದರು. ಪ್ರತಿ ವರ್ಷ ಮಳೆ ಸಮಯಕ್ಕೆ ಸರಿಯಾಗಿ ಬರದ ಕಾರಣ ನಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಇದನ್ನು ಅನುಭವಿಸಿದ್ದ ರೈತ ನಾದಿರ್ ಪಾಷ ಅವರು, ಕಳೆದ 9 ವರ್ಷಗಳ ಹಿಂದೆ ತಮ್ಮ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆಸಿದರು. ಮುಂದೆ ಒಂದೂವರೆ ವರ್ಷದ ವರೆಗೆ ಮೆಕ್ಕೆಜೋಳ, ನೆಲಗಡಲೆ(ಶೆಂಗಾ)ಗಳನ್ನು ಬೆಳೆದರು. ತಮ್ಮ ಸ್ನೇಹಿತರಾದ ಆಂಧ್ರ ಪ‍್ರದೇಶದ ಪ್ರಗತಿಪರ ರೈತ ರಾಮಬಾಬು, ಕುಷ್ಟಗಿಯ ಜಗನ್ನಾಥ, ಬಯ್ಯಾಪುರದ ಶರಣೇಗೌಡ ಅವರ ಸಲಹೆ ಪಡೆದು ತಾವೂ ಸಹ ಅವರಂತೆ ದಾಳಿಂಬೆ ಬೆಳೆಯಲು ಮುಂದಾದರು.

ನಂತರದ ದಿನಗಳಲ್ಲಿ ಮಹಾರಾಷ್ಟ್ರದಿಂದ ದಾಳಿಂಬೆ ಸಸಿಗಳನ್ನು ತಂದರು. ಈ ಬೆಳೆಗೆ ಮೊದಲು ಲಕ್ಷಾಂತರ ರೂಪಾಯಿಗಳನ್ನು ಸಾಲ ಮಾಡಿ ಔಷಧ ಗೊಬ್ಬರಗಳನ್ನು ಹಾಕಿ ದಾಳಿಂಬೆಯ ಗಿಡಗಳನ್ನು ಆರೋಗ್ಯ ಕರವಾಗಿ ಬೆಳೆಸಿದರು.

ಮೊದಲನೆಯ ಬೆಳೆಯಲ್ಲಿ ₹ 12 ಲಕ್ಷ ಬೆಲೆಯ ಹಣ್ಣುಗಳನ್ನು ಮಾರಾಟ ಮಾಡಿ, ಮಾಡಿದ ಸಾಲಗಳನ್ನು ತೀರಿಸಿ, ಇಂದಿಗೆ ಇವರು ಇನ್ನಿತರ ರೈತರಿಗರ ಮಾದರಿಯಾಗಿ ಹಲವಾರು ಜನ ರೈತರಿಗೆ ಮಾರ್ಗದರ್ಶಿಗಳಾಗಿದ್ದಾರೆ.

ತೋಟದಲ್ಲಿ ದಾಳಿಂಬೆ ಗಿಡಗಳು 1 ವರ್ಷ 4 ತಿಂಗಳು ಬೆಳೆದು ಇನ್ನೇನು ಹೂ ಬಿಡುವ ವೇಳೆಗೆ ಗಿಡದ ಮುಂದಿನ ತುದಿ ಭಾಗವನ್ನು ಕತ್ತರಿಸಿ ಹಾಕಲಾಗುವದು. ಇದರಿಂದ 1 ತಿಂಗಳ ಮುಂಚಿತವಾಗಿ ಗಿಡಗಳಿಗೆ ನೀರನ್ನು ಹಾಯಿಸಿದೇ ತಡೆಯ ಬಹುದು. ಇದರಿಂದ ಗಿಡಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಈ ಪ್ರೋನಿಂಗ್ ಕಾರ್ಯವನ್ನು ಜೂನ್ ತಿಂಗಳಲ್ಲಿ ಮಾಡಬೇಕು. ದಾಳಿಂಬೆ ಹಣ್ಣಿನ ಕಟಾವು ಸಮಯವನ್ನು ಮಳೆಗಾಲದಿಂದ ತಪ್ಪಿಸ ಬಹುದಲ್ಲದೇ, ಹಲವಾರು ಕೀಟಬಾಧೆ ದುಂಡಾಣು ರೋಗದಿಂದ ತಪ್ಪಿಸಬಹುದು. ನಂತರ ಗಿಡಗಳಿಗೆ ವಿವಿಧ ಗೊಬ್ಬರ ಮಿಶ್ರಣ ಮಾಡಿ ಸಿಂಪಡಿಸಬೇಕು. ಏಳು ದಿನಗಳ ಬಳಿಕ ಹಳದಿ ಬಣ್ಣಕ್ಕೆ ತಿರುಗಿದ ಎಲೆಗಳು ಉದರಿ ಬೀಳುತ್ತವೆ ಎಂಬ ಸಲಹೆಯನ್ನು ನಾದಿರ್ ಪಾಷ ನೀಡುತ್ತಾರೆ.

ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿದ್ದು, ಸ್ವಲ್ಪ ನೀರಿನಲ್ಲಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೆಲವು ರೈತರ ದಾಳಿಂಬೆ ಬೆಳೆಗೆ ರೋಗ ತಗುಲಿದೆ ಎನ್ನುವ ಇವರು, ಎರಡನೇ ವರ್ಷ ಬೆಳೆದ ದಾಳಿಂಬೆ ಹಣ್ಣುಗಳನ್ನು ಬೆಂಗಳೂರು, ಚೆನ್ನೈನಲ್ಲಿ ಹಣ್ಣು ಮಾರಾಟ ಮಾಡಿ ಸುಮಾರು ₹ 19 ಲಕ್ಷ ವಹಿವಾಟು ನಡೆಸಿದ್ದಾರೆ.

ಈ ವರ್ಷ ಎರಡು ಸಾವಿರ ಕೇಸರ್ ತಳಿಯ ದಾಳಿಂಬೆ ಗಿಡಗಳನ್ನು ಹಾಕಿದ್ದು ಒಂದು ಗಿಡದಲ್ಲಿ ಕನಿಷ್ಟ 50 ರಿಂದ 75 ಹಣ್ಣುಗಳ ಇಳುವರಿ ಬಂದಿದೆ ಎನ್ನುತ್ತಾರೆ ಅವರು.

’ನಮ್ಮ ಜಮೀನಿನಲ್ಲಿ ಕೆಲವು ದಾಳಿಂಬೆ ಗಿಡಗಳಿಗೆ ಹಣ್ಣುಗಳಿಗೆ, ಅಂಗಮಾರಿ ಅಂಟುರೋಗ ಕಂಡು ಬರುತ್ತಿದೆ. ಮುಂದೆ ಹೀಗೆ ಆದರೆ ನಷ್ಟ ಅನುಭವಿಸುವದಕ್ಕಿಂತ ಬೇರೆ ಬೆಳೆ ನೋಡಬೇಕಾಗುತ್ತದೆ. ಅಂಗಮಾರಿ ರೋಗ ತಗುಲಿದ ದಾಳಿಂಬೆ ಗಿಡವು ಸಂಪೂರ್ಣ ಒಣಗುತ್ತದೆ. ಅದನ್ನು ತಡೆಯಲು ಇಲ್ಲಿಯವರಿಗೆ ಯಾವುದೇ ವಿಜ್ಞಾನಿ ಔಷಧಿ ಕಂಡು ಹಿಡಿದಿಲ್ಲಾ. ರೋಗವಾಧ ಗಿಡಗಳನ್ನು ಮೊದಲು ಕಿತ್ತಿ ಎಸೆಯಬೇಕು ಇಲ್ಲವಾದರೆ ಪಕ್ಕದ ಗಿಡಗಳಿಗೆ ರೋಗ ತಗಲುತ್ತದೆ‘ ಎಂದರು.

‘ತಮ್ಮ 11 ಎಕರೆ ಪ್ರದೇಶಲ್ಲಿ ಹಾಕಿದ ದಾಳಿಂಬೆ ಗಿಡಗಳ ನಿರ್ವಹಣೆಗೆ ಕೂಲಿಕಾರ್ಮಿಕರ ಕೊರತೆ ಇದ್ದು. ಹಣ್ಣುಗಳ ಕಟಾವು ಬಂದಾಗ ಮಾತ್ರ ದಿನಗೂಲಿ ಕಾರ್ಮಿಕರನ್ನು ಅವರು ಕೇಳಿದಷ್ಟು ಹಣ ನೀಡಿ ಕೆಲಸ ಮಾಡಿಸಿಕೊಳ್ಳುತ್ತೇವೆ. ಉಳಿದಂತೆ ಪ್ರತಿದಿನ ಹಣ್ಣಿನ ಗಿಡಗಳ ನಿರ್ವಹಣೆಗೆ ತಾನು ಮತ್ತು ತಮ್ಮ ಸಹೋದರರ ಮಕ್ಕಳು ದುಡಿಯುತ್ತೇವೆ. ಹಣ್ಣುಗಳ ಖರೀದಿಗೆ ಹಣ್ಣು ವ್ಯಾಪಾರಿಗಳು ಈಗೀಗ ಅವರೇ ಸ್ಥಳದಲ್ಲಿಯೇ ಬಂದು ಹಣ್ಣುಗಳಿಗೆ ಬೆಲೆ ನಿಗದಿಗೊಳಿಸಿ ತಾವೆ ತೆಗೆದುಕೊಂಡು ಹೋಗುತ್ತಾರೆ ಎಂದು ರೈತ ನಾದೀರಪಾಷ ಮುಲ್ಲಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT