ಪೌಷ್ಟಿಕ ಆಹಾರದ ಮಹತ್ವದ ಅರಿವು ಅಗತ್ಯ

ತಾಳಕೇರಿ (ಯಲಬುರ್ಗಾ): ‘ಮಕ್ಕಳಲ್ಲಿ ಕ್ರಿಯಾತ್ಮಕ ಹಾಗೂ ವೈಜ್ಞಾನಿಕ ಮನೋಭಾವನೆ ವೃದ್ಧಿಸುವಲ್ಲಿ ಪೋಷಣ ಅಭಿಯಾನ ಮಹತ್ವದ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ಮನದಟ್ಟಾಗುವಂತೆ ಮಾದರಿ ಕೆಲಸ ಮಾಡಿದ್ದು ಶ್ಲಾಘನೀಯ’ ಎಂದು ಉಪ ತಹಶೀಲ್ದಾರ್ ವಿಜಯಕುಮಾರ ಗುಂಡೂರ ಹೇಳಿದರು.
ತಾಲ್ಲೂಕಿನ ತಾಳಕೇರಿ ಪ್ರೌಢಶಾಲೆಯ ರಾಮನ್ ವಿಜ್ಞಾನ ಸಂಘ, ಸುಗಂಧ ಇಕೋ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೋಷಣ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಹಕ್ಕೆ ಬೇಕಾದ ಪೋಷಕಾಂಶಗಳು ಯಾವ್ಯಾವು?. ಅವುಗಳು ಎಷ್ಟರಮಟ್ಟಿಗೆ ದೇಹಕ್ಕೆ ಶಕ್ತಿ ನೀಡಬಲ್ಲವು ಎಂಬುದನ್ನು ಚಿತ್ರ ಸಮೇತ ತೋರಿಸಿದ್ದು ಉತ್ತಮ ರಚನಾತ್ಮಕ ಕಾರ್ಯವಾಗಿದೆ ಎಂದು ಹೇಳಿದರು.
ವಿಜ್ಞಾನ ಶಿಕ್ಷಕ ದೇವೇಂದ್ರಪ್ಪ ಜಿರ್ಲಿ ಮಾತನಾಡಿ,‘ದೇಶಿ ಆಹಾರ ಸಂಸ್ಕೃತಿಯೇ ಉತ್ತಮ ಆಹಾರ ಪದ್ಧತಿಯಾಗಿದೆ. ತಾಜಾ ಆಹಾರ ಸೇವನೆಯೇ ಕಡಿಮೆಯಾಗುತ್ತಿದೆ. ಯಾಂತ್ರಿಕ ಬದುಕಿಗೆ ಒಗ್ಗಿಕೊಂಡಿರುವ ನಾವುಗಳು ಆರೊಗ್ಯದ ಕಡೆ ಗಮನ ಕೊಡುತ್ತಿಲ್ಲ. ಇದರಿಂದ ಆರೋಗ್ಯ ಕೂಡ ಕ್ಷೀಣಿಸುತ್ತಿರುವುದು ಹೆಚ್ಚಾಗಿದೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪುಷ್ಪಾ ಮಾತನಾಡಿ,‘ಸೆಪ್ಟೆಂಬರ್ ಮಾಸದಲ್ಲಿ ದೇಶದಾದ್ಯಂತ ರಾಷ್ಟ್ರೀಯ ಪೋಷಣ ಅಭಿಯಾನ ನಡೆಯುತ್ತಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಹೆಚ್ಚು ಮೆರಗು ಬಂದಿದೆ’ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜುನಾಥ ಅವರು ಆಹಾರದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಸೇವನೆ ಅವಶ್ಯಕತೆಯ ಕುರಿತು ಮಾಹಿತಿ ನೀಡಿದರು.
ಅತಿಥಿಗಳಾಗಿ ತಿಮ್ಮಣ್ಣ ಜಗ್ಗಲ್, ಶೋಭಾ ಬಾಗೇವಾಡಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಬಾಬುಸಾಬ್ ಲೈನದಾರ್ ಮಾತನಾಡಿದರು.
ಶಾಲೆಯ ಕೆಲ ಮಕ್ಕಳು ಅನಿಸಿಕೆ ವ್ಯಕ್ತಪಡಿಸಿದರು. ರೇಣುಕಾ ಅಚಲಕರ್ ಕಾರ್ಯಕ್ರಮ ನಿರೂಪಿಸಿದರು. ರಜಿಯಾಬೇಗಂ ಸ್ವಾಗತಿಸಿದರು. ಉಮಾ ಹಿರೇಮಠ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.