ಗಂಗಾವತಿ: ‘ಲಂಚ ಪಡೆದು ಸಾರಿಗೆ ಇಲಾಖೆ ನೌಕರರ ಮುಷ್ಕರ ನಡೆಯದಂತೆ ನೋಡಿಕೊಂಡಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಕೂಡಲೇ ಬಂಧಿಸಬೇಕು’ ಎಂದು ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಪದಾಧಿಕಾರಿಗಳು ಇಲ್ಲಿನ ಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸಂಘಟನೆ ಮುಖ್ಯಸ್ಥ ಎ.ಹುಲಗಪ್ಪ ಮಾತನಾಡಿ,‘ಸಾರಿಗೆ ಇಲಾಖೆಯ 1 ಲಕ್ಷಕ್ಕೂ ಅಧಿಕ ಸಿಬ್ಬಂದಿ 4 ದಿನ ಬಸ್ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಘೋಷಣೆ ಮಾಡಿದ್ದರು. ಮುಷ್ಕರದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರು ರಾಜ್ಯ ಸರ್ಕಾರದ ಜತೆಗೆ ಶಾಮೀಲಾಗಿ ₹30 ಕೋಟಿ ಪಡೆದು ಪ್ರತಿಭಟನೆ ನಡೆಯದಂತೆ ನೋಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.
ಕೂಡಲೇ ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಭ್ರಷ್ಟಾಚಾರ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪಕ್ಷದ ಕಾರ್ಯಕರ್ತರಾದ ಎ.ಎಲ್.ತಿಮ್ಮಣ್ಣ, ಪರಶುರಾಮ, ಲಕ್ಷ್ಮಣ, ಕರಿಯಪ್ಪ, ಯಮನೂರಪ್ಪ, ಹನುಮಂತಪ್ಪ, ಶಂಕ್ರಪ್ಪ, ರಾಘವೇಂದ್ರ ಹಾಗೂ ಶೇಖಮ್ಮ ಇದ್ದರು.