ಕುಷ್ಟಗಿ: ಪಿಎಸ್ಐ ಅವರು, ವಿನಾಕಾರಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ, ಪಟ್ಟಣದಲ್ಲಿ ಕೆಲವರು ಬಸವೇಶ್ವರ ವೃತ್ತದ ಬಳಿ ರಸ್ತೆಯಲ್ಲಿ ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಕೆಲ ಹೊತ್ತಿನಲ್ಲೇ ಸ್ಥಳದಲ್ಲಿ ಜಮಾಯಿಸಿದ ಅನೇಕ ಯುವಕರು, ಯುವಕನನ್ನು ರಸ್ತಯಲ್ಲಿಯೇ ಒದ್ದು ಹಲ್ಲೆ ನಡೆಸಿದ್ದಾರೆ ಎಂದು ಎಸ್ಐ ಮುದ್ದುರಂಗಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ಉಂಟಾಗಿತ್ತು. ನಂತರ ಸ್ಥಳಕ್ಕೆ ಬಂದ ಸಿಪಿಐ ಯಶವಂತ ಬಿಸನಳ್ಳಿ, ಕ್ರೈಂ ಪಿಎಸ್ಐ ಮಾನಪ್ಪ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಯತ್ನಿಸಿದರು. ನಂತರ ಈ ಕುರಿತು ವಿವರಿಸಿದ ಯಶವಂತ ಬಿಸನಳ್ಳಿ, ಪಿಎಸ್ಐ ವಿರುದ್ಧ ಸಾರ್ವಜನಿಕರು ದೂರು ನೀಡಿದ್ದು, ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಹಲ್ಲೆ ನಡೆಸಿಲ್ಲ.. ಎಸ್ಐ ಸ್ಪಷ್ಟನೆ:
ಎಸ್ಐ ಮುದ್ದುರಂಗಸ್ವಾಮಿ ಪ್ರತಿಕ್ರಿಯಿಸಿ, ಇತ್ತೀಚಿನ ದಿನಗಳಲ್ಲಿ ಪಟ್ಟಣದ ಕೆಲ ಯುವಕರು ಅನಗತ್ಯವಾಗಿ ಬೈಕ್ಗಳ ಸೈಲೆನ್ಸರ್ಗಳನ್ನು ಬಿಚ್ಚಿ ಜೋರಾದ ಶಬ್ದದೊಂದಿಗೆ ಬೈಕ್ ಚಲಾಯಿಸುವುದು, ಬಾಲಕಿಯರ ಶಾಲೆ, ಕಾಲೇಜುಗಳ ಎದುರು ಅತಿರೇಕದಿಂದ ವರ್ತಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದಿವೆ. ಶುಕ್ರವಾರ ಅದೇ ರೀತಿ ಶುಕ್ರವಾರ ಬೆಳಿಗ್ಗೆ ಬಾಲಕನೊಬ್ಬ ಸೈಲೆನ್ಸರ್ ಬಿಚ್ಚಿ ಬೈಕ್ ಚಲಾಯಿಸುತ್ತಿದ್ದುದಕ್ಕೆ ಕೇಳಿ ತಾಕೀತು ಮಾಡಲಾಗಿತ್ತು. ಅವಮಾನವಾಗುವ ರೀತಿಯಲ್ಲಿ ಹಲ್ಲೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಕುರಿತು ಮಾಹಿತಿ ನೀಡಿದ ಕೆಲವರು, ನಿಯಮ ಮೀರಿ ಬೈಕ್ ಚಲಾಯಿಸಿದ್ದರೆ ಕಾನೂಕು ಪ್ರಕಾರ ಕ್ರಮ ಜರುಗಿಸಬೇಕಿತ್ತು. ಆದರೆ ಪಿಎಸ್ಐ ಯುವಕನನ್ನು ದಾರಿಯಲ್ಲೇ ಒದ್ದು ನಂತರ ಠಾಣೆಗೆ ಕರೆದೊಯ್ದು, ಬೆಲ್ಟ್ನಿಂದ ಹೊಡೆಯುವ ಮೂಲಕ ಅತಿರೇಕದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.