ಯಲಬುರ್ಗಾ: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಎರಡು ತಿಂಗಳ ಪಡಿತರ ಆಹಾರಧಾನ್ಯವನ್ನು ಒಟ್ಟಿಗೆ ವಿತರಿಸಲು ಕ್ರಮ ಕೈಗೊಂಡಿದೆ.
ತಾಲ್ಲೂಕಿನ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಣೆ ಶುರುವಾಗಿದೆ. ಕೊನೆಯ ದಿನಾಂಕ ನಿಗದಿಯಾಗಿಲ್ಲ. ಯಾವುದೇ ಕಾರಣಕ್ಕೂ ಒಟ್ಟಿಗೆ ಸೇರಿ ಜನದಟ್ಟಣೆ ಮಾಡಬಾರದು ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.
ಆಹಾರ ಧಾನ್ಯ ಪಡೆದುಕೊಳ್ಳುವುದಕ್ಕೆ ಏ.15 ಕಡೆಯದಿನ ಎಂದು ತಪ್ಪು ಸಂದೇಶ ಹರಡಿರುವುದರಿಂದ ಗ್ರಾಹಕರು ನ್ಯಾಯಬೆಲೆ ಅಂಗಡಿಗೆ ಒಟ್ಟಿಗೆ ಹೋಗಿ ಸ್ವೀಕರಿಸಲು ಮುಂದಾಗುತ್ತಿದ್ದಾರೆ. ಇದರಿಂದ ಜನದಟ್ಟಣೆ ಹೆಚ್ಚಾಗಿ ನೂಕು ನುಗ್ಗಾಟ ಉಂಟಾಗುತ್ತಿದೆ ಎಂದರು.
ಗುಂಪು ಗುಂಪಾಗಿ ಸೇರುವುದರಿಂದ ಕೊರೊನಾ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿವೆ. ಪ್ರತಿ ಗ್ರಾಹಕರಿಗೂ ಧಾನ್ಯಗಳು ಲಭ್ಯವಾಗಲಿದ್ದು, ಶಾಂತ ರೀತಿಯಲ್ಲಿ ಮತ್ತು ಅಂತರ ಕಾಯ್ದುಕೊಂಡು ಪಡೆದುಕೊಳ್ಳಬೇಕು. ಎಂದು ತಿಳಿಸಿದ್ದಾರೆ.