ಕೊಪ್ಪಳ: ಸೆ. 21ರಂದು ನಡೆಯುವ ವಿಧಾನಮಂಡಲ ಅಧಿವೇಶನದಲ್ಲಿ ಆಶಾ ಕಾರ್ಯಕರ್ತರ ಬೇಡಿಕೆಗಳ ಕುರಿತು ಧ್ವನಿ ಎತ್ತಬೇಕು ಎಂದು ಒತ್ತಾಯಿಸಿರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯತು ಶಾಸಕ ರಾಘವೇಂದ್ರ ಹಿಟ್ನಾಳ್ಗೆ ಭಾನುವಾರ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ನಿರ್ಲಕ್ಷಿಸಿದರೆ ಮತ್ತೆ ಹೋರಾಟಕ್ಕಿಳಿಯಲು ಆಶಾ ಕಾರ್ಯಕರ್ತೆಯರು ಸಜ್ಜಾಗಿದ್ದಾರೆ. ಸೆ. 22ರಂದು ಜಿಲ್ಲಾ ಮಟ್ಟದಲ್ಲಿ ಸೆ. 23ರಂದು ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮನವಿ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜುಲೈ 10ರಿಂದ 29ರ ವರೆಗೆ ಕೆಲಸ ಸ್ಥಗಿತಗೊಳಿಸಿ, ಮುಷ್ಕರ ನಡೆಸಲಾಗಿತ್ತು. ಆಗ ಸಚಿವರು ಇನ್ನೂ ಎರಡು ದಿನಗಳಲ್ಲಿ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಮುಷ್ಕರ ಮುಗಿದು 49 ದಿನಗಳು ಕಳೆದರೂ ಯಾವ ಅಧಿಕೃತ ಆದೇಶ ಇಲ್ಲಿವರೆಗೂ ಹೊರಬಿದ್ದಿಲ್ಲ. ಆದ್ದರಿಂದ ಈಗ ಮತ್ತೆ ಆಶಾ ಕಾರ್ಯಕರ್ತೆಯರು ಹೋರಾಟ ಕ್ಕಿಳಿಯುವುದು ಅನಿವಾರ್ಯವಾಗಿದೆ ಎಂದು ಮನವಿ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ₹ 12 ಸಾವಿರ ಕೂಡಲೇ ಘೋಷಿಸಬೇಕು. ಬಾಕಿ ಇರುವ ಪ್ರೋತ್ಸಾಹಧನ ಆಶಾ ಕಾರ್ಯಕರ್ತರಿಗೂ ಒದಗಿಸಲು ಕ್ರಮ ಕೈಗೊಳ್ಳಬೇಕು.ಈಗಾಗಲೇ ಘೋಷಿಸಿದ ₹ 3,000 ಕೋವಿಡ್ ಪ್ರೋತ್ಸಾಹಧನ ಇನ್ನೂ ತಲುಪದಿರುವವರಿಗೆ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದುಆಶಾ ಕಾರ್ಯಕರ್ತರು ಒತ್ತಾಯಿಸಿದರು.
ಎಐಯುಟಿಯುಸಿಯ ಜಿಲ್ಲಾ ಅಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯಾ ಹಿರೇಗೌಡರ್, ಆಶಾ ಕಾರ್ಯಕರ್ತೆಯರ ಮುಖಂಡರಾದ ಗಿರಿಜಮ್ಮ,ಶಾಂತಮ್ಮ, ಶಾರದಾ, ಅನ್ನಪೂರ್ಣ, ಸುನಿತಾ, ಶಬಾನಾ ಇದ್ದರು.