ಕೊಪ್ಪಳ: ಸುಪ್ರೀಂ ಕೋರ್ಟ್ ಆದೇಶದಂತೆ ಅಂಗವಿಕಲ ನೌಕರರಿಗೆ ಅವರ ಸೇವಾ ಜೇಷ್ಠತೆಯನ್ನು ಅನುಸರಿಸಿ ಶೇ 3 ರಷ್ಟು ಬಡ್ತಿ ಮೀಸಲಾತಿ ಆದೇಶವನ್ನು ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡುವಂತೆ ಅಂಗವಿಕಲ ನೌಕರರ ಸಂಘದಿಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಶೇ 3 ರಷ್ಟು ಬಡ್ತಿ ಮೀಸಲಾತಿ ನೀಡುವಂತೆ ಸುಪ್ರಿಂ ಕೋರ್ಟ್ ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದರೂ ಸಹ ರಾಜ್ಯ ಸರ್ಕಾರ ಜಾರಿಗೆ ಮಾಡಿಲ್ಲ. ಇದರ ವಿರುದ್ದ ಅಂಗವಿಕಲ ನೌಕರ ಸಿದ್ದರಾಜು ಅವರು, ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿದರು. ಅದರ ಅನ್ವಯ ಸುಪ್ರೀಂ ಕೋರ್ಟ್ನಲ್ಲಿ ಅಂಗವಿಕಲ ನೌಕರರ ಪರವಾಗಿ ತೀರ್ಪು ಬಂದಿತ್ತು.
ಅದರ ಪ್ರತಿಯನ್ನು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಕಳೆದ 6 ತಿಂಗಳ ಹಿಂದೆ ನೀಡಿದ್ದರೂ ಸಹ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ಈಗಾಗಲೇ ಅನೇಕ ಇಲಾಖೆಯಲ್ಲಿ ಬಡ್ತಿ ನೀಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಆದೇಶ ಜಾರಿಯಾಗದಿದ್ದರಿಂದ ಅಂಗವಿಕಲ ನೌಕರರು ಬಡ್ತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ತಾವು ಈ ಕೂಡಲೇ ಇದನ್ನು ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಆದೇಶ ಜಾರಿಯಾಗುವ ತನಕ ಯಾವುದೇ ಇಲಾಖೆಯಲ್ಲಿ ಬಡ್ತಿ ನೀಡುವ ಪ್ರಕ್ರಿಯೆಗೆ ತಡೆ ನೀಡುವಂತೆ ಪತ್ರ ಬರೆಯುವ ಮೂಲಕ ಅಂಗವಿಕಲ ನೌಕರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸಂಘದರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ ಮನವಿ ಮಾಡಿದರು.
ಸಂಘದ ಪ್ರಮುಖರಾದ ಮಂಜುನಾಥ ಹಿಂಡಿಹುಳ್ಳಿ, ಕಾಶಿನಾಥ ಸಿರಿಗೇರಿ, ಮಂಜುನಾಥ ಬುಲ್ಟಿ, ನಾಗಪ್ಪ ದೇವನಾಳ, ಎಚ್.ಆರ್.ಹಂಜಕ್ಕಿ, ಅಂದಪ್ಪ ಇದ್ಲಿ, ಟಿ.ಗೋವಿಂದಪ್ಪ, ಮೆಹಬೂಬ್ ಅಳವಂಡಿ ಇದ್ದರು.