ಹುಲಿಗಿ (ಮುನಿರಾಬಾದ್): ‘ಇಂದಿನ ಯಾಂತ್ರಿಕ ಯುಗದಲ್ಲಿ ಒತ್ತಡರಹಿತ ಜೀವನಕ್ಕೆ ಅಧ್ಯಾತ್ಮ ಶಿಕ್ಷಣ ಅತ್ಯವಶ್ಯಕ’ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಮಾನಸ ಅಭಿಪ್ರಾಯಪಟ್ಟರು.
ಮಹಾಶಿವರಾತ್ರಿ ಅಂಗವಾಗಿ ಸಮೀಪದ ಹುಲಿಗಿಯಲ್ಲಿ ನಡೆದ 21 ವಿಶಿಷ್ಟ ಲಿಂಗಗಳ ದರ್ಶನ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗೊಂದಲದಲ್ಲಿರುವ ವ್ಯಕ್ತಿಯ ಮನಸ್ಸನ್ನು ಪರಮಾತ್ಮನ ಸತ್ಯ ಪರಿಚಯ ಮಾಡಿಸುವತ್ತ ನಮ್ಮ ಸಂಸ್ಥೆ ಸುಮಾರು 15 ವರ್ಷಗಳಿಂದ ಈ ಗ್ರಾಮದಲ್ಲಿ ಪ್ರವಚನ ತರಗತಿಯನ್ನು ನಡೆಸುತ್ತ ಬಂದಿದೆ. ನಮ್ಮ ಸಂಸ್ಥೆಗೆ ಕಾಯಂ ಕಟ್ಟಡ ನೀಡುವ ಭರವಸೆ, ಭರವಸೆಯಾಗಿಯೇ ಉಳಿದಿದೆ. ಇಲ್ಲಿನ ಹಿರಿಯರು ಭರವಸೆಯನ್ನು ಈಡೇರಿಸಲು ಮನಸ್ಸು ಮಾಡಬೇಕು’ ಎಂದರು.
ಹಿರಿಯ ರಂಗ ಕಲಾವಿದ ಕೊಟ್ರಯ್ಯ ಸ್ವಾಮಿ ಹಿರೇಮಠ ಮಾತನಾಡಿ,‘ಸಂಸ್ಥೆಯು ಪ್ರತಿವರ್ಷ ಮಹಾಶಿವರಾತ್ರಿ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸುತ್ತಿದ್ದು, 2021 ವರ್ಷವನ್ನು ಸಂಕೇತವಾಗಿರಿಸಿಕೊಂಡು 21 ಶಿವಲಿಂಗಗಳ ದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ. ಜನಾರ್ಧನ, ಗಣ್ಯರಾದ ವಿಜಯಕುಮಾರ ಶೆಟ್ಟಿ, ಶಿವಲೀಲಮ್ಮ ಹಿರೇಮಠ ಸ್ಥಳೀಯ ವಿಶ್ವವಿದ್ಯಾಲಯದ ಮತ್ತು ಪತಂಜಲಿ ಪರಿವಾರದವರು ಪಾಲ್ಗೊಂಡಿದ್ದರು.