ಕೊಪ್ಪಳ: ಪ್ರತಿನಿತ್ಯ ಬೆಳಿಗ್ಗೆ ಮನೆಮನೆಗೆ ಪತ್ರಿಕೆಗಳನ್ನು ಹಂಚುವ ಪತ್ರಿಕಾ ವಿತರಕರುಚಳಿ, ಗಾಳಿ ಹಾಗೂ ಮಳೆ ಲೆಕ್ಕಿಸದೇ ತಮ್ಮ ಕೆಲಸ ಮಾಡುತ್ತಾರೆ. ಅವರು ಓದುಗರು ಮತ್ತು ಪತ್ರಿಕಾ ಸಮೂಹದ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಬೆಳಗಿನ ಜಾವ 4 ಗಂಟೆಯಿಂದಲೇ ಅವರ ದಿನಚರಿ ಶುರುವಾಗುತ್ತದೆ. ದಿನಪತ್ರಿಕೆ ಹಂಚುವ ಕೆಲಸ ಮುಗಿಯುವ ಹೊತ್ತಿಗೆ ಬೆಳಿಗ್ಗೆ 8 ಗಂಟೆ ದಾಟಿರುತ್ತದೆ. ಪತ್ರಿಕೆ ಹಂಚುವವರು ಅಕ್ಷರ ಬೆಳಕನ್ನು ಮನೆಗಳಿಗೆ ತಲುಪಿಸುವ ಶ್ರಮಜೀವಿಗಳಾಗಿದ್ದಾರೆ.ಸರ್ಕಾರ ನಮಗೂ ಸೌಲಭ್ಯಗಳನ್ನು ಕೊಡಬೇಕು ಎನ್ನುವ ಬೇಡಿಕೆ ಅವರದ್ದು.
ಸರ್ಕಾರದಿಂದಲೇ ಪತ್ರಿಕಾ ವಿತರಕರ ದಿನ ಆಯೋಜಿಸಬೇಕು, ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಪಿಂಚಣಿ ಸೌಲಭ್ಯ ನೀಡಬೇಕು, ಪರಿಹಾರ ನಿಧಿ ಸ್ಥಾಪಿಸಬೇಕು, ವಿಮಾ ಸೌಲಭ್ಯ ಕೊಡಬೇಕು, ತಮ್ಮ ಮಕ್ಕಳ ಶಿಕ್ಷಣಕ್ಕೆ ಸಹಕರಿಸಬೇಕು ಎನ್ನುವುದು ಅವರ ಪ್ರಮುಖ ಬೇಡಿಕೆಗಳು. ಅವರು ಭಾನುವಾರ ‘ಪತ್ರಿಕಾ ವಿತರಕರ ದಿನ’ ಆಚರಿಸಿದರು.
ಕೊಪ್ಪಳ ನಗರದಲ್ಲಿ ಮಹೇಶ ಚಕ್ರಸಾಲಿ, ಮಂಜುನಾಥ್ ಟಪಾಲ್, ಗವಿರಾಜ್ ಕಂದಾರಿ, ಮಹೆಬೂಬ್ ಸಾಬ್ ಗಂಗಾವತಿ, ಮರಿಸ್ವಾಮಿ ಆಚರಣೆ ಮಾಡಿದರು.
‘20 ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದೇನೆ. ಇದರಿಂದಲೇ ಜೀವನ ಕಟ್ಟಿಕೊಂಡಿದ್ದೇನೆ. ಸಾಕಷ್ಟು ಆತ್ಮತೃಪ್ತಿ ಸಿಕ್ಕಿದೆ. ಬೇರೆ ಯಾವ ಕೆಲಸ ಮಾಡುವ ಗೋಜಿಗೆ ಹೋಗಿಲ್ಲ’ ಎಂದು ಮಹೇಶ ಚಕ್ರಸಾಲಿ ಹೇಳಿದರು.
ಕಾರಟಗಿಯಲ್ಲಿ ‘ಪ್ರಜಾವಾಣಿ’ ಪತ್ರಿಕೆ ವಿತರಕರು ಕೇಕ್ ಕತ್ತರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಶರಣಪ್ಪ ಹಡಪದ, ಹನುಮೇಶ, ಜಮದಗ್ನಿ, ಮಾರುತಿ, ಆಂಜನೇಯ,ಅಶೋಕ್, ಅರುಣ್, ಶಿವರಾಜ್, ರಾಘವೇಂದ್ರ, ಮಾರುತಿ ಹಾಗೂ ಹರೀಶ್ ಇದ್ದರು.
*
ಪತ್ರಿಕಾ ವಿತರಣೆ ಲಾಭದ ಉದ್ದೇಶದಿಂದ ಮಾತ್ರವಲ್ಲ ಸೇವೆ ಅಂದುಕೊಂಡು ಕೆಲಸ ಮಾಡುತ್ತಿದ್ದೇವೆ. ಸರ್ಕಾರ ಕೂಡ ಪತ್ರಿಕಾ ವಿತರಕರಿಗೆ ಸೌಲಭ್ಯವನ್ನು ಕೊಡಬೇಕು. -ಚಾಂದಪಾಷ ನಂದಾಪುರ,ಕನಕಗಿರಿ, ಪತ್ರಿಕಾ ವಿತರಕರು