ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಪ್ರೇಯಸಿ ಮಾತು ಬಿಟ್ಟರೆ ಅಶ್ಲೀಲ ಗೋಡೆ ಬರಹ ಬರೆಯುತ್ತಿದ್ದ ಪ್ರೇಮಿ!

ಕನಕಗಿರಿಯಲ್ಲಿ ವ್ಯಾಪಕವಾಗಿದ್ದ ಹಾವಳಿಗೆ ಅಂತ್ಯ ಹಾಡಿದ ಪೊಲೀಸರು; ಆರೋಪಿ ಬಂಧನ
Published 30 ಜುಲೈ 2023, 4:19 IST
Last Updated 30 ಜುಲೈ 2023, 4:19 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಕನಕಗಿರಿಯಲ್ಲಿ ಒಂದೂವರೆ ವರ್ಷದಿಂದ ಪೊಲೀಸರಿಗೆ ಸವಾಲಾಗಿದ್ದ ಶಾಲೆ ಹಾಗೂ ಕಾಲೇಜುಗಳು ಗೋಡೆಗಳ ಮೇಲೆ ಅಶ್ಲೀಲ ಬರಹ ಬರೆಯುತ್ತಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆ ಯುವಕ ತಾನು ಪ್ರೀತಿಸುತ್ತಿದ್ದ ಬಾಲಕಿ ತನ್ನೊಂದಿಗೆ ಮಾತು ಬಿಟ್ಟಾಗ ಹಾಗೂ ಕೋಪಗೊಂಡಾಗ ಗೋಡೆಯ ಮೇಲೆ ಅಶ್ಲೀಲವಾಗಿ ಬರೆದು ಸೇಡು ತೀರಿಸಿಕೊಳ್ಳುತ್ತಿದ್ದ ಎನ್ನುವ ಅಂಶ ಕೂಡ ಪೊಲೀಸರ ವಿಚಾರಣೆಯಲ್ಲಿ ಬಹಿರಂಗವಾಗಿದೆ. ಕನಕಗಿರಿಯ 27 ವರ್ಷದ ಮೆಹಬೂಬ್‌ ಸಿಕಲಗಾರ ಬಂಧಿತ. ಅಶ್ಲೀಲ ಬರಹದ ಹಾವಳಿಯಿಂದಾಗಿ ಸಾರ್ವಜನಿಕರು ಬೇಸತ್ತು ಹೋಗಿದ್ದರು. ಇಬ್ಬರು ವಿದ್ಯಾರ್ಥಿನಿಯರನ್ನು ಗುರಿಯಾಗಿರಿಸಿಕೊಂಡು ಬರೆಯುತ್ತಿದ್ದರಿಂದ ಅವರ ಕುಟುಂಬದವರು ಸಾಕಷ್ಟು ನೊಂದಿದ್ದರು.

ಈ ಕುರಿತು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮತ್ತು ಇದೇ ತಿಂಗಳು 11ರಂದು ಕನಕಗಿರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ತಾಂತ್ರಿಕ ತನಿಖೆಗಾಗಿ ಹೆಚ್ಚಿನ ಜವಾಬ್ದಾರಿಯನ್ನು ಕೊಪ್ಪಳದ ಸಿಇಎನ್‌ ಪೊಲೀಸ್‌ ಠಾಣೆಗೆ ವಹಿಸಲಾಗಿತ್ತು. ಮೇಲಿಂದ ಮೇಲೆ ದೊಡ್ಡದಾಗಿ ಗೋಡೆಗಳ ಮೇಲೆ ಅಶ್ಲೀಲವಾಗಿ ಬರೆಯುತ್ತಿದ್ದರಿಂದ ಆ ವಿದ್ಯಾರ್ಥಿಗಳು ಶಾಲೆಗೆ ಹೋಗುವುದೇ ಸಮಸ್ಯೆಯಾಗಿತ್ತು.

ಎರಡು ವರ್ಷಗಳಿಂದ ಪ್ರೀತಿ: ಮೆಹಬೂಬ್‌ ಸಿಕಲಗಾರ ಬಾಲಕಿಯೊಬ್ಬಳನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಸ್ನೇಹಿತನೆಂದುಕೊಂಡು ಆ ಬಾಲಕಿ ಮೆಹಬೂಬ್‌ ಜೊತೆ ಆಗಾಗ ಮಾತನಾಡುತ್ತಿದ್ದಳು. ಬಾಲಕಿ ಮಾತನಾಡುವುದನ್ನು ನಿಲ್ಲಿಸಿದಾಗ ಅಶ್ಲೀಲವಾಗಿ ಬರೆಯುವುದು, ಬೇರೆ ಹುಡುಗರ ಹೆಸರಿನಲ್ಲಿ ಸಾಮಾಜಿಕ ತಾಣದ ಖಾತೆ ತೆರೆದು ಅಶ್ಲೀಲವಾಗಿ ಸಂದೇಶ ಕಳಿಸುವುದನ್ನು ಮಾಡಿದ್ದಾನೆ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

ಇದನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಖಚಿತಪ‍ಡಿಸಿದರು.

‘ನೀವು ಬಡವರಿದ್ದೀರಿ. ನಮ್ಮ ಮನೆಯಲ್ಲಿ ಸರ್ಕಾರಿ ನೌಕರಿ ಇರುವ ಹುಡುಗನನ್ನು ನೋಡಿ ಮದುವೆ ಮಾಡುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ನನ್ನ ಜೊತೆ ಮಾತನಾಡಬೇಡ’ ಎಂದು ಬಾಲಕಿ ಹೇಳಿದ ನಂತರ ಆರೋಪಿ ಗೋಡೆ ಮೇಲೆ ಹೆಚ್ಚು ಅಶ್ಲೀಲವಾಗಿ ಬರೆದಿದ್ದಾನೆ. ಬಾಲಕಿಯ ಮಾತಿನಿಂದ ಮತ್ತಷ್ಟು ಕೆರಳಿದ ಮೆಹಬೂಬ್‌ ಅಶ್ಲೀಲವಾಗಿ ಬರೆದು ತಾನು ಪ್ರೀತಿಸುತ್ತಿದ್ದ ಬಾಲಕಿಯ ಸ್ನೇಹಿತರ ಹಾಗೂ ಅವರ ಸಹೋದರಿಯರ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಚಿತ್ರಗಳನ್ನು ಎಡಿಟ್‌ ಮಾಡಿ ಬಾಲಕಿಯ ಪಾಲಕರ ಮತ್ತು ಸ್ನೇಹಿತರ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾನೆ.

‘ಈ ಎಲ್ಲಾ ವಿಷಯಗಳನ್ನು ಆರೋಪಿ ಒಪ್ಪಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ ಇನ್‌ಸ್ಟಾಗ್ರಾಂ ಖಾತೆಯ ಮೆಹಬೂಬ್‌ನದ್ದೇ ಆಗಿದ್ದು, ನಕಲಿ ಖಾತೆ ಸೃಷ್ಟಿಸಿದ್ದ’ ಎಂದು ಎಸ್ಪಿ ವಂಟಗೋಡಿ ಹೇಳಿದರು.

ಯಶೋಧಾ ವಂಟಗೋಡಿ
ಯಶೋಧಾ ವಂಟಗೋಡಿ

Quote - ಬಂಧಿತ ಆರೋಪಿ ಸಾರ್ವಜನಿಕವಾಗಿ ತನ್ನನ್ನು ತಾನು ಸಂಭಾವಿತ ಎಂದು ಬಿಂಬಿಸಿಕೊಂಡಿದ್ದ. ಆತ ಪ್ರೀತಿಸುತ್ತಿದ್ದು ಬಾಲಕಿಯನ್ನಾದ ಕಾರಣ ಪೋಕ್ಸೊ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗುವುದು ಯಶೋಧಾ ವಂಟಗೋಡಿ ಎಸ್ಪಿ

ಎರಡು ತಂಡಗಳ ರಚನೆ
ಘಟನೆ ಕುರಿತು ಎರಡು ಪ್ರಕರಣಗಳು ದಾಖಲೆಯಾದರೂ ಅಶ್ಲೀಲ ಬರಹದ ಆರೋಪಿಯನ್ನು ಪತ್ತೆ ಹೆಚ್ಚಲು ಆಗಿರಲಿಲ್ಲ. ಇತ್ತೀಚೆಗೆ ಇದರ ಹಾವಳಿ ವ್ಯಾಪಕವಾಗಿದ್ದರಿಂದ ಸಾರ್ವಜನಿಕವಾಗಿಯೂ ಟೀಕೆ ವ್ಯಕ್ತವಾಗಿತ್ತು. ಆದ್ದರಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಟಗೋಡಿ ಅವರು ಗಂಗಾವತಿ ಉಪವಿಭಾಗದ ಡಿವೈಎಸ್‌ಪಿ ರುದ್ರೇಶ ಉಜ್ಜನಕೊಪ್ಪ ಕನಕಗಿರಿ ಠಾಣೆಯ ಪೊಲೀಸ್‌ ಇನ್‌ಸ್ಟೆಕ್ಟರ್‌ ಜಗದೀಶ ಕೆ.ಜಿ. ಸಿಪಿಸಿಗಳಾದ ಗವಿಸಿದ್ದಯ್ಯ ಗವಿಕುಮಾರ ಬಸವರಾಜ ಅವರನ್ನು ಒಳಗೊಂಡ ಒಂದು ತಂಡ ರಚಿಸಿದ್ದರು. ಸೆನ್‌ (ಸೈಬರ್‌ ಆರ್ಥಿಕ ಹಾಗೂ ಮಾದಕದ್ರವ್ಯ ಅಪರಾಧಗಳ ನಿಗ್ರಹ) ಠಾಣೆ ಇನ್‌ಸ್ಟೆಕ್ಟರ್‌ ಅಮರೇಶ ಹುಬ್ಬಳ್ಳಿ ಸಿಬ್ಬಂದಿ ಬಸವರಾಜ ಅಂಗಡಿ ಸವಿತಾ ಸಜ್ಜನ್‌ ಕೋಟೇಶ್ ಮತ್ತು ಎಸಿಪಿ ಪ್ರಸಾದ ಅವರನ್ನು ಒಳಗೊಂಡ ಇನ್ನೊಂದು ತಂಡವನ್ನೂ ಕಾರ್ಯಾಚರಣೆಗೆ ನಿಯೋಜಿಸಿದ್ದರು.
ಆರೋಪಿ ಪತ್ತೆಗೆ ನೆರವಾದ ಹೆಸರುಗಳು!
ಪೊಲೀಸರು 100ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದ್ದು ಒಂದೆಡೆಯಾದರೆ ಅಶ್ಲೀಲ ಬರಹಗಳಲ್ಲಿ ಆರೋಪಿ ಬರೆಯುತ್ತಿದ್ದ ಹೆಸರುಗಳು ಈ ಪ್ರಕರಣವನ್ನು ಭೇದಿಸಲು ಪ್ರಮುಖವಾಗಿ ನೆರವಾಗಿದೆ. ಆರೋಪಿಯ ಬರಹಗಳಲ್ಲಿ ಬಾಲಕಿಯ ಕುಟುಂಬ ಸದಸ್ಯರು ಸಂಬಂಧಿಕರ ಹೆಸರುಗಳೇ ಹೆಚ್ಚಾಗಿರುತ್ತಿದ್ದವು. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಪೊಲೀಸರು ಬಾಲಕಿಯ ಮನೆಯ ಸುತ್ತಮುತ್ತಲಿನವರು ಅಥವಾ ಸಂಬಂಧಿಕರೇ ಈ ಕೃತ್ಯ ಮಾಡುತ್ತಿರಬಹುದು ಎನ್ನುವ ಬಲವಾದ ಶಂಕೆ ಹೊಂದಿದ್ದರು. ಇದೇ ಆಧಾರದ ಮೇಲೆ ಅವರ ಮನೆಯ ಸುತ್ತಲಿನವರನ್ನೇ ಹೆಚ್ಚು ವಿಚಾರಣೆ ಮಾಡಿದಾಗ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಬೇರೆಯವರ ವಿಚಾರಣೆಯಿಂದಲೂ ಅನೇಕ ಸತ್ಯಗಳು ಹೊರಬಂದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT