ಕಾರಟಗಿ: ಪಟ್ಟಣದ 11ನೇ ವಾರ್ಡ್ನ ಸಿಬಿಎಸ್ ನಗರದಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಲಾಗಿದೆ ಎಂದು ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
3 ತಿಂಗಳ ಹಿಂದೆಯೇ ಚರಂಡಿ ಕಾಮಗಾರಿ ಮಾಡಲಾಗಿದ್ದು, ಅದು ಅವೈಜ್ಞಾನಿಕವಾಗಿದೆ. ಇದರಿಂದಾಗಿ ಚರಂಡಿಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ.
ಈ ರಸ್ತೆಯಲ್ಲಿ ಚಿಕ್ಕಮಕ್ಕಳು, ವೃದ್ಧರು ಮತ್ತು ಮಹಿಳೆಯರ ಸಂಚರಿಸಲು ಸಮಸ್ಯೆಯಾಗಿದೆ. ಮುರಂ ಹಾಕಿ ರಸ್ತೆ ಸಮತಟ್ಟು ಮಾಡಿದರೆ ಜನರಿಗೆ ಅನುಕೂಲವಾಗಲಿದೆ. ಶೀಘ್ರವೇ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಸ್ಥಳೀಯರಾದ ಶಿವಪುತ್ರಪ್ಪ, ಚನ್ನನಗೌಡ, ಶರಣಪ್ಪ ಸುಂಕದ ಆಗ್ರಹಿಸಿದರು.
ಕಾಮಗಾರಿಯ ಆರಂಭದಿಂದಲೂ ಯೋಜನೆಯಂತೆ ಚರಂಡಿ ನಿರ್ಮಾಣ ಮಾಡಿಲ್ಲ. ಇದರಿಂದಾಗಿ ಚರಂಡಿಯ ನೀರು ರಸ್ತೆಗೆ ಬಂದು ನಿಲ್ಲುತ್ತಿದೆ. ಅಧಿಕಾರಿಗಳು ಮಾತ್ರ ತಮ್ಮ ನಿರ್ಲಕ್ಷ್ಯತನ ಮುಂದುವರೆಸಿದ್ದಾರೆ ಎಂದು ಚಂದ್ರಶೇಖರಸ್ವಾಮಿ ಅಸಮಧಾನ ವ್ಯಕ್ತಪಡಿಸಿದರು.
ಪುರಸಭೆ ಮುಖ್ಯಾಧಿಕಾರಿ ಡಾ. ಎನ್. ಶಿವಲಿಂಗಪ್ಪ ಪ್ರತಿಕ್ರಿಯಿಸಿ, ಚರಂಡಿ ಕಾಮಗಾರಿ ಇನ್ನೂ ಬಾಕಿಯಿದೆ. ವ್ಯವಸ್ಥಿತ ಕಾಮಗಾರಿ ಮಾಡಲು ಲೇಔಟ್ಗಳು ಸರಿಯಿಲ್ಲ. ಜನರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.