ಕೊಪ್ಪಳ: ಪಿಎಸ್ಐ ನೇಮಕಾತಿ ಮಾಡಿಸಿಕೊಡುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ ₹15 ಲಕ್ಷ ಪಡೆದ ಬಗ್ಗೆ ಕನಕಗಿರಿ ಬಿಜೆಪಿ ಶಾಸಕ ಬಸವರಾಜ ದಢೇಸಗೂರ ಅವರ ಮೇಲೆ ಆರೋಪ ಕೇಳಿಬಂದಿದೆ.
ಈ ಕುರಿತು ಆಡಿಯೊ ವೈರಲ್ ಆಗಿದೆ. ಪರಸಪ್ಪ ಬೇಗೂರು ಎಂಬುವರು ಶಾಸಕರಿಗೆ ಪೋನ್ ಮಾಡಿ ನನ್ನ ಮಗನ ಪಿಎಸ್ಐ ನೇಮಕಾತಿಗೆ ಕೊಟ್ಟ ₹15 ಲಕ್ಷ ಹಣವನ್ನು ವಾಪಸ್ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಶಾಸಕ ಹೌದು ನೀನು ದುಡ್ಡು ಕೊಟ್ಟಿದ್ದೀಯಾ, ವಾಪಸ್ ಕೊಡ್ತೀನಿ ಅಂತ ಹೇಳಿನಲ್ಲ ಎನ್ನುವ ಮಾತುಗಳು ಆಡಿಯೊದಲ್ಲಿದೆ.
ಆಡಿಯೊ ಸಂಭಾಷಣೆ ಹೀಗಿದೆ.
ಪರಸಪ್ಪ: ನನ್ನ ಹಣ ಕೊಡಿ. ಕೈ ಮುಗಿತೀನಿ. ಸರ್, ಬರ್ತೀನಿ ಮೂರ್ನಾಲ್ಕು ದಿನ ಆಯಿತು.
ಶಾಸಕ: ನಾನು ಬೆಂಗಳೂರಿಗೆ ಬಂದಿದ್ದೇನೆ. ಜಿಲ್ಲಾಧ್ಯಕ್ಷ ದೊಡ್ಡನಗೌಡ ಹತ್ತಿರ ಮಾತನಾಡಿದ್ದೇನೆ.
ಪರಸಪ್ಪ: ಹೌದು ಸರ್, ದೊಡ್ಡನಗೌಡರು ನಮಗೆ ಬೇಕಾದವರು.
ಶಾಸಕ: ನನಗೆ ಯಾರಿಂದಲೂ ಹೇಳಿಸುವುದು, ಕೇಳಿಸುವುದು ಬೇಕಾಗಿಲ್ಲ. ದುಡ್ಡು ವಾಪಸ್ ಕೊಡುತ್ತೇನೆ.
ಪರಸಪ್ಪ: ಹಣ ಕೊಟ್ಟು ಒಂದೂವರೆ ವರ್ಷ ಆಯಿತು ಸರ್.
ಶಾಸಕ: ಹಣ ಪಡೆದಿದ್ದೇನೆ ಸರ್ಕಾರಕ್ಕೆ ಕೊಟ್ಟ ಹಣ ಅದು. ಬೆಂಗಳೂರಿನಿಂದ ವಾಪಸ್ ಬಂದ ಮೇಲೆ ಕೊಡುತ್ತೇನೆ.
ಪರಸಪ್ಪ: ಬೆಂಗಳೂರಿನಿಂದ ವಾಪಸ್ ಬಂದ ಮೇಲೆ ನಿಮ್ಮ ಬಳಿ ಬರುವೆ. ಹಣದ ತೊಂದರೆಯಾಗಿದೆ.
ಶಾಸಕ: ಬಾರಪ್ಪ, ಅನುಮಾನ ಬೇಡ. ಹಣ ಖಂಡಿತಾ ಕೊಡುತ್ತೇನೆ.
ಎರಡನೇ ಆಡಿಯೊ ಹೀಗಿದೆ;
ಶಾಸಕ: ನನಗೆ ಎಷ್ಟು ಕೋಟಿ ಹಣ ಕೊಟ್ಟಿದ್ದೀಯಪ್ಪ
ಪರಸಪ್ಪ: ಸರ್, ₹15 ಲಕ್ಷ ಕೊಟ್ಟಿದ್ದೇನೆ.
ಶಾಸಕ: ನಿನಗೆ ಮಾನ ಮರ್ಯಾದೆ ಎನಾದರೂ ಇದೆಯಾ, ಇಲ್ಲವಾ? ಯಾರ ಮುಂದೆ ಎನು ಮಾತನಾಡಬೇಕು ಎನ್ನುವ ಸೌಜನ್ಯ ಇದೆಯೊ ಇಲ್ಲವೊ?
ಪರಸಪ್ಪ: ಎಲ್ಲಾ ಹೇಳಿದ್ದೇವಲ್ಲ ಸರ್.
ಶಾಸಕ: ಹಣ ಕೊಡು ಎಂದು ನಾನೇನು ನಿಮ್ಮ ಮನೆಗೆ ಬಂದಿದ್ದೆನಾ? ನಿನ್ನ ಉದ್ದೇಶವೇನು? ನೀನು ಯಾವ ಕೆಲಸಕ್ಕೆ ಹಣ ಕೊಟ್ಟಿದ್ದೀಯಾ? ಅದನ್ನು ಹೇಗೆ ಕೇಳಬೇಕು ಎನ್ನುವ ಸೌಜನ್ಯವಿಲ್ಲವಾ? ಹುಚ್ಚನ ರೀತಿಯಲ್ಲಿ ಮಾತನಾಡುತ್ತಿದ್ದೀಯಾ? ಎಲ್ಲರೂ ನನಗೆ ಪೋನ್ ಕರೆ ಮಾಡುತ್ತಿದ್ದಾರೆ. ಹಿಂಗೆ ಕೇಳಿದರೆ ಬಹಳ ನಿಷ್ಠುರವಾಗಿ ಮಾತನಾಡ ಬೇಕಾಗುತ್ತದೆ. ಸಾಲ ಕೊಡು ಎಂದು ಕೇಳಲು ನಿನ್ನ ಮನೆಗೆ ಬಂದಿದ್ದೇನಾ? ಗೌರವದಿಂದ ಕೊಟ್ಟಿದ್ದೀಯಾ. ನಾಲ್ಕು ದಿನ ಹೆಚ್ಚು ಕಡಿಮೆ ಆಗುತ್ತದೆ. ಹಣ ನಾನೇ ಹೇಳಿ ಕೊಡಿಸುತ್ತೇನೆ. ಅದಕ್ಕೆ ನಾನು ಜವಾಬ್ದಾರಿಯಾಗಿದ್ದೇನೆ. ನಿನ್ನ ಅವಸರಕ್ಕೆ, ನಿನ್ನ ಕೆಲಸಕ್ಕೆ ಹಣ ಕೊಟ್ಟಿದ್ದೀಯಾ. ಹಣ ಬೇರೆಯವರ ಕಡೆ ಇದೆ. ಅನುಕೂಲ ಮಾಡಿ ವಾಪಸ್ ಕೊಡಿಸುವೆ.
ನೋಡ್ರಿ ಪರಸಪ್ಪ ಮಾತು ಲೂಸ್ ಆಗಿದ್ರೆ ಸರಿಇರಲ್ಲ. ನಿನ್ನ ಹಣದಿಂದ ನನಗೆ ಎನೂ ಆಗಬೇಕಾಗಿಲ್ಲ. ಮಾತನಾಡಬೇಕಾದರೆ ಬಹಳ ಗೌರವದಿಂದ ಇರಬೇಕು. ಹಣ ಕೊಟ್ಟಿದ್ದಕ್ಕೆ ಯಾವುದೇ ದಾಖಲೆಗಳಿಲ್ಲ.
ಪರಸಪ್ಪ: ನಾನು ಬಡವ ಇದ್ದೇನೆ ಸರ್.
ಶಾಸಕ: ನೀನು ಬಡವ, ಶ್ರೀಮಂತ ಎನೇ ಆಗಿರು. ಮಾತು ಸರಿಯಾಗಿ ಇರಬೇಕು.
ಪರಸ್ಪಪ್ಪ: ಸರ್, ಹಣ ಕೊಡುವುದಾದರೆ ಕೊಡಿ. ಇಲ್ಲವಾದರೆ ಇಲ್ಲ ಎಂದು ಹೇಳಿಬಿಡಿ.
ಶಾಸಕ: ನಾನು ಕೊಡ್ತೀನಿ. ಇವೆಲ್ಲ ಹೇಳಬೇಡ. ನಿನ್ನ ಬಳಿ ಸಾಲ ತಂದಿಲ್ಲ. ಇಷ್ಟೇ ದಿನದಲ್ಲಿ ಕೊಡ್ತೇನೆ ಎಂದು ಹೇಳಿದ್ನಾ?
ಪರಸಪ್ಪ: ಕೊಡುವುದಿಲ್ಲ ಎಂದು ಹೇಳಿ ಬಿಡಿ ಸರ್.
ಶಾಸಕ: ಕೊಡುವುದಿಲ್ಲ ಎಂದು ನಾನು ಯಾಕೆ ಹೇಳಲಿ. ಅಂತ ಚಿಲ್ಲರೆ ಕೆಲಸ ಮಾಡುವುದಿಲ್ಲ.
ಕನಕಗಿರಿ ಶಾಸಕರನ್ನು ಬಂಧಿಸಿ: ತಂಗಡಗಿ
ಪಿಎಸ್ಐ ನೇಮಕಾತಿ ಮಾಡಿಸಿಕೊಡುವುದಾಗಿ ಹೇಳಿ ಹಣ ಪಡೆದ ಆರೋಪ ಎದುರಿಸುತ್ತಿರುವ ಕನಕಗಿರಿ ಶಾಸಕ ಬಸವರಾಜ ದಢೇಸಗೂರ ಅವರನ್ನು ಬಂಧಿಸಬೇಕು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಆಗ್ರಹಿಸಿದರು. ಇಲ್ಲವಾದರೆ ಹೋರಾಟ ಮಾಡಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.