ಕೊಪ್ಪಳ: ಆರೋಗ್ಯವಾಗಿ ಇರಬೇಕಾದರೆ ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದುಮೈಸೂರಿನ ಸರ್ಕಾರಿ ನೇಚರ್ ಕ್ಯೂರ್ ಮತ್ತು ಯೋಗ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ನ ಯೋಗಪಟು ಹಾಗೂ ತರಬೇತುದಾರ ಮಾರುತಿ ಕೊಪ್ಪಳ ಹೇಳಿದರು.
ನಗರದ ಗವಿಸಿದ್ದೇಶ್ವರ ಪದವಿ ಕಾಲೇಜಿನಲ್ಲಿ ಗುರುವಾರ ಪ್ರಾಧ್ಯಾಪಕರಿಗೆ ಹಮ್ಮಿಕೊಂಡಿರುವ ಒಂದು ತಿಂಗಳ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯೋಗದಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಪ್ರಸ್ತುತ ಪ್ರಪಂಚವನ್ನೆ ಕಾಡುತ್ತಿರುವ ಕೋವಿಡ್-19 ವೈರಾಣುವನ್ನು ತಡೆಗಟ್ಟಲು ಇದು ಅನುಕೂಲವಾಗಿದೆ.ತರಬೇತಿಯಿಲ್ಲದೆ ಯೋಗ ಮಾಡಬಾರದು. ಸೂಕ್ತವಾದ ತರಬೇತಿ ಪಡೆದ ಮೇಲೆ ಯೋಗದಲ್ಲಿ ತೊಡಗಿಕೊಳ್ಳುವದು ಸೂಕ್ತ. ಇಲ್ಲವಾದಲ್ಲಿ ದೈಹಿಕವಾಗಿ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿರುತ್ತವೆ ಎಂದರು.
ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ನ ಕಾರ್ಯದರ್ಶಿ ಡಾ.ಆರ್.ಮರೇಗೌಡ ಮಾತನಾಡಿ, ಜೂ.21 ರಂದು ಅಂತರರಾಷ್ಟ್ರಿಯ ಯೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಯೋಗದ ದೃಷ್ಟಿಕೋನದಿಂದ ಅತ್ಯಂತ ಹೆಚ್ಚು ಮಹತ್ವ ಪಡೆದಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಜೆ.ಎಸ್.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಟ್ರಸ್ಟ್ನ ಕಾರ್ಯನಿರ್ವಹಣಾ ಅಧಿಕಾರಿ ಡಾ.ಏಕನಾಥ ಏಕಬೋಟೆ, ದೈಹಿಕ ಶಿಕ್ಷಣ ನಿರ್ದೇಶಕ ವಿನೋದ ಮುದಿಬಸನಗೌಡರ್, ಪ್ರಾಧ್ಯಾಪಕ ಡಾ. ಕರಿಬವೇಶ್ವರ ಸ್ವಾಗತಿಸಿದರು. ಡಾ.ನಾಗರಾಜ ದಂಡೋತಿ ನಿರೂಪಿಸಿದರು. ಶರಣಪ್ಪ ಜಾಲಿಹಾಳ ವಂದಿಸಿದರು.