ತಾವರಗೇರಾ: ಪಾಳು ಬಿದ್ದ ಬಸವಣ್ಣ ಕ್ಯಾಂಪ್ ಬಸ್ ತಂಗುದಾಣ ಸ್ಥಳೀಯ ಯುವ ಬ್ರಿಗೇಡ್ ಸದಸ್ಯರ ಶ್ರಮದಾನದಿಂದ ಹೊಸ ರೂಪ ಪಡೆದಿದೆ.
ತಾವರಗೇರಾ ಪಟ್ಟಣದ ಬಸವಣ್ಣ ಕ್ಯಾಂಪ್ನ ಬಸ್ ತಂಗುದಾಣದ ಸುತ್ತ ಗಿಡ–ಗಂಟಿ ಬೆಳೆದು ಸಾರ್ವಜನಿಕರು ಒಳಗೆ ಹೋಗದ ಪರಿಸ್ಥಿತಿ ಇತ್ತು.
ಯುವ ಬ್ರಿಗೇಡ್ ಸದಸ್ಯರು ಶನಿವಾರ ಶ್ರಮದಾನ ಮಾಡಿದರು. ಬಸ್ ನಿಲ್ದಾಣದ ಮುಂದೆ ಬೆಳೆದಿದ್ದ ಗಿಡ–ಗಂಟಿಗಳು ಮತ್ತು ಸುತ್ತಲೂ ಬೆಳೆದ ಮುಳ್ಳು ಗಿಡಗಳನ್ನು ತೆರವುಮಾಡಿದರು.
ಬಸ್ ನಿಲ್ದಾಣವನ್ನು ತೊಳೆದು ನಾಡ ಧ್ವಜದ ಬಣ್ಣಗಳನ್ನು ಬಳಿಯಲಾಯಿತು. ಸದಸ್ಯರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಪಟ್ಟಣದ ಚಂದ್ರಶೇಖರ ಸರನಾಳಗೌಡರ, ಮಂಜುನಾಥ ದರೋಜಿ ಬಸ್ ತಂಗುದಾಣ ಸ್ವಚ್ಚತೆಗೆ ಸಹಕಾರ ನೀಡಿದ್ದಾರೆ. ಉಚಿತವಾಗಿ ಬಣ್ಣ ನೀಡಿದ್ದಾರೆ.
‘ಪಟ್ಟಣದಲ್ಲಿ ಪಾಳು ಬಿದ್ದ ನರಹರಿ ದೇವಸ್ಥಾನ ಮತ್ತು ಕರಿವೀರಣ್ಣ ದೇವಸ್ಥಾನದ ಕಲ್ಯಾಣಿ ಸ್ವಚ್ಚತೆಗೊಳಿಸುವ ಮೂಲಕ ಸಾರ್ವಜನಿಕರಿಗೆ ಬಾವಿಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಿದ್ದೆವು. ಪ್ರತಿ ವಾರ ಪಟ್ಟಣದಲ್ಲಿ ಮಾಡುತ್ತಿದ್ದೇವೆ’ ಎಂದು ಯುವ ಬ್ರಿಗೇಡ್ನ ಭೀಮೇಶ ಭಂಡಾರಿತಿಳಿಸಿದರು.
ಯುವ ಬ್ರಿಗೇಡ್ ಸಂಘಟನೆಯ ಶ್ಯಾಮ್ ಬಂಗಿ, ನೀಲಕಂಠ, ಲಕ್ಷ್ಮಣ ವಗರನಾಳ, ಮಂಜು ಚಿನ್ನಾಪೂರ, ಭೀಮೇಶ ಭಂಡಾರಿ, ಲಕ್ಷ್ಮೀಕಾಂತ, ಪ್ರಶಾಂತ ಕಲಾಲ ಮತ್ತು ಸಂಘಟನೆಯ ಸದಸ್ಯರು ಇದ್ದರು.