ಭಾರತೀನಗರ: ಕಳೆದ ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ಸಮೀಪದ ಕೊಕ್ಕರೆ ಬೆಳ್ಲೂರು ಗ್ರಾಮದ ಹಲವು ರೈತರ ವೀಳ್ಯದೆಲೆ, ಬಾಳೆ ತೋಟಗಳು ನಾಶವಾಗಿವೆ.
ಗ್ರಾಮದ ರೇಣುಕಮ್ಮ, ಗೌರಮ್ಮ, ಎಂಬುವವರಿಗೆ ಸೇರಿದ ವೀಳ್ಯದೆಲೆ ತೋಟ, ಪುಟ್ಟಸ್ವಾಮಿ ಬಿನ್ ಲೇ.ಕೆಂಪೇಗೌಡ ಎಂಬುವವರಿಗೆ ಸೇರಿದ ಬಾಳೆ ತೋಟ ಬಿರುಗಾಳಿಗೆ ಸಿಕ್ಕಿದ ತರಗೆಲೆಗಳಂತೆ ನೆಲಕ್ಕುರುಳಿದೆ.
‘ಬೆಳೆ ಕಳೆದುಕೊಂಡ ರೈತರು ಕಂಗಾಲಾಗಿದ್ದು, ಬರಗಾಲದಲ್ಲಿಯೂ ಕೊಳವೆ ಬಾವಿಯಿಂದ ನೀರನ್ನು ಖರೀದಿಸಿ ಬೆಳೆಯನ್ನು ಉಳಿಸಿಕೊಂಡಿದ್ದೆವು. ಆದರೆ ಶುಕ್ರವಾರ ಬೀಸಿದ ಬಿರುಗಾಳಿಯಿಂದ ಬೆಳೆ ಜೊತೆಗೆ ಜೀವನವನ್ನು ನಾಶ ಮಾಡಿದೆ’ ಎಂದು ಅಳಲು ತೋಡಿಕೊಂಡಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಸೋಮಶೇಖರ್, ತೋಟಗಾರಿಕೆಗೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಅಧಿಕಾರಿಗಳು ಆಗಮಿಸಿ ನಾಶಗೊಂಡ ತೋಟಗಳಲ್ಲಿ ನಷ್ಟದ ಅಂದಾಜು ಮಾಡಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಅಣ್ಣೂರು ಗ್ರಾಮದ ಚಾಮುಂಡೇಶ್ವರಿ ಗ್ಯಾಸ್ ಪ್ಲಾಂಟ್, ಸೂಳೆಕೆರೆ ನಾಲೆ ರಸ್ತೆಯಲ್ಲಿಯೂ ಕೂಡ ರಸ್ತೆ ಬದಿಯಲ್ಲಿದ್ದ ಮರಗಳ ರೆಂಬೆಗಳು, ಮರಗಳು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದು ಅಪಾರ ನಷ್ಟ ಉಂಟಾಗಿದೆ.
ಬಿದರಹಳ್ಳಿ ಗ್ರಾಮದ ಕುಳ್ಳಲೀಂಗೇಗೌಡರ ಪುತ್ರ ಶೀನೇಗೌಡ ಎಂಬುವವರಿಗೆ ಸೇರಿದ ಪೆಟ್ಟಿಗೆ ಅಂಗಡಿ ಚಾವಣಿ ಹಾರಿಹೋಗಿದ್ದು, ಪೆಟ್ಟಿಗೆ ಅಂಗಡಿಗೂ ನಷ್ಟವಾಗಿದೆ. ಚಿನ್ನೇಗೌಡ್ರ ಮಗ ದೇವರಾಜು ಎಂಬುವವರ ಸೆಕಂಡರಿ ಲೈನ್ ಮೇಲೆ ನೀಲಗಿರಿ ಮರ ಮುರಿದು ಬಿದ್ದಿದ್ದು ಇಲ್ಲಿಯವರೆಗೂ ಅದನ್ನು ಸರಿಪಡಿಸಿಲ್ಲ ಎಂದು ರೈತರು ದೂರಿದ್ದಾರೆ.