ಮೇಲುಕೋಟೆ: ಇಲ್ಲಿನ ದೇವರಹಳ್ಳಿಯ ಪ್ರಸನ್ನ (35) ಎಂಬುವವರು ಮಂಗಳವಾರ ಬೆಂಗಳೂರಿನ ನಾಗದೇವನಹಳ್ಳಿಯ ಸ್ನೇಹಿತರ ಕೊಠಡಿಯಲ್ಲಿ ಸೆಲ್ಫಿ ವಿಡಿಯೊ ಮಾಡಿ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ನನ್ನ ಸಾವಿಗೆ ಅರಕನಕೆರೆ ಗ್ರಾಮದ ಇಬ್ಬರೂ ವ್ಯಕ್ತಿಗಳು ಕಾರಣ. ಮಾನಸಿಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದು, ನಾನೇ ಸಾಯುತ್ತಿದ್ದೇನೆ’ ಎಂದು ವಿಡಿಯೊದಲ್ಲಿ ತಿಳಿಸಿದ್ದಾರೆ. ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ: ಪ್ರಸನ್ನ ಅವರ ಕುಟುಂಬಸ್ಥರು, ಸ್ನೇಹಿತರು ಅರಕನಕೆರೆ ಗ್ರಾಮಕ್ಕೆ ಬುಧವಾರ ಶವ ತಂದು ಪ್ರತಿಭಟಿಸಿದರು. ಸಾವಿಗೆ ಕಾರಣರಾದ ವ್ಯಕ್ತಿಗಳ ಮನೆಯ ಮುಂದೆ ಶವವಿಟ್ಟು ನ್ಯಾಯ ಕೇಳುತ್ತೇವೆ’ ಎಂದು ಗ್ರಾಮದ ಒಳಗೆ ಪ್ರವೇಶಿಸಲು ಯತ್ನಿಸಿದ್ದರು.
ಗ್ರಾಮಸ್ಥರು ಅವರನ್ನು ತಡೆದಾಗ, ಮಾತಿನ ಚಕಮಕಿ ನಡೆಯಿತು. ಮೇಲುಕೋಟೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.