ಮಂಡ್ಯ: ತಾಲ್ಲೂಕಿನ ಕೀಲಾರ ಗ್ರಾಮದ ರೈತ ಕೃಷ್ಣೇಗೌಡರ ಕುಟುಂಬದಲ್ಲಿ ಜಾನುವಾರು ಸಾವಿನ ಸರಣಿ ಮುಂದುವರಿದಿದೆ. ಗುರುವಾರ ಬೆಳಿಗ್ಗೆ ಇನ್ನೊಂದು ಹಸು ಮೃತಪಟ್ಟಿದ್ದು ಕಳೆದೆರಡು ವರ್ಷದಿಂದ ಇಲ್ಲಿಯವರೆಗೆ 30 ಜಾನುವಾರು ಸಾವಿಗೀಡಾಗಿವೆ.
ಕೊಟ್ಟಿಗೆಯಲ್ಲಿದ್ದ ಹಸು ಉಸಿರಾಟದ ಸಮಸ್ಯೆಯಿಂದ ಒದ್ದಾಡುತ್ತಿತ್ತು. ಕೂಡಲೇ ರೈತ ಕುಟುಂಬ ಸದಸ್ಯರು ಪಶು ವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಡಾ.ರಮೇಶ್ ರಾಜು ಚಿಕಿತ್ಸೆ ನೀಡಿದರು. ಹಸುವನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಿ ಚಿಕಿತ್ಸೆ ಮುಂದುವರಿಸಲಾಯಿತು. ಆದರೂ ಚಿಕಿತ್ಸೆಗೆ ಸ್ಪಂದಿಸದ ಹಸು ಮೃತಪಟ್ಟಿತು.
‘ಹಸುವಿನ ರಕ್ತ ಮಾದರಿ ಸಂಗ್ರಹಿಸಲಾಗಿದ್ದು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು’ ಎಂದು ಡಾ.ರಮೇಶ್ ರಾಜು ತಿಳಿಸಿದರು.
ಜಾನುವಾರುಗಳ ಸರಣಿ ಸಾವಿನಿಂದ ರೈತ ಕುಟುಂಬ ಕಂಗಾಲಾಗಿದೆ. ಗಣೇಶ ಹಬ್ಬದ ದಿನದಂದೇ ಒಂದು ಹಸು ಮೃತಪಟ್ಟಿತ್ತು.
ಇಲ್ಲಿಯವರೆಗೆ 20 ಜೆರ್ಸಿ ಹಸು, 8 ನಾಟಿ ಹಸು, 1 ಮೇಕೆ ಹಾಗೂ 1 ಟಗರು ಮೃತಪಟ್ಟಿವೆ.
ಜಾನುವಾರುಗಳ ಸಾವು ನಿಗೂಢವಾಗಿದ್ದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯಾಲಾಜಿಕ್ಸ್ (ಐಎಎಚ್ವಿಬಿ) ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಯುತ್ತಿದೆ. ಜೊತೆಗೆ ಪೊಲೀಸ್ ತನಿಖೆಯೂ ನಡೆಯುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.