ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಪಥ ಹೆದ್ದಾರಿಯಲ್ಲಿ ತಾತ್ಕಾಲಿಕ ತಿರುವು; ಅಪ್ಪಳಿಸುತ್ತಿದೆ ಸಾವು

ಮುಖ್ಯ ಪಥದಿಂದ ಸರ್ವೀಸ್‌ ರಸ್ತೆಗೆ ಪ್ರವೇಶಿಸುವಾಗ ಅಪಘಾತ, ವಾಹನಗಳು ಜಖಂ
Published 22 ಮೇ 2023, 19:08 IST
Last Updated 22 ಮೇ 2023, 19:08 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರು– ಮೈಸೂರು ದಶಪಥದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿ
ರುವ ಪ್ರವೇಶ– ನಿರ್ಗಮನ ಪಥ ಅವೈಜ್ಞಾನಿಕವಾಗಿದ್ದು ವಾಹನ ಸವಾರರ ಜೀವ ತೆಗೆಯುತ್ತಿದೆ. ಮುಖ್ಯ ಪಥದಿಂದ ಸರ್ವೀಸ್‌ ರಸ್ತೆಗೆ, ಸರ್ವೀಸ್‌ ರಸ್ತೆಯಿಂದ ಮುಖ್ಯ ಪಥಕ್ಕೆ ತಿರುವು ತೆಗೆದುಕೊ
ಳ್ಳುವಾಗ ಅಪಘಾತಗಳು ಸಂಭವಿಸುತ್ತಿವೆ.

ಬೆಂಗಳೂರು–ಮೈಸೂರು ನಡುವಿನ ಸಂಪರ್ಕಕ್ಕೆ ಮಾತ್ರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದ್ಯತೆ ನೀಡಿದ್ದು ನಡುವಿನ ನಗರ, ಪಟ್ಟಣಗಳ ಸಂಪರ್ಕವನ್ನು ನಿರ್ಲಕ್ಷಿಸಿದೆ. ಎಕ್ಸ್‌ಪ್ರೆಸ್‌ವೇ ಉದ್ಘಾಟನೆ
ಯಾಗಿ 2 ತಿಂಗಳಾದರೂ ನಿಗದಿತ ಸ್ಥಳದಲ್ಲಿ ಅಧಿಕೃತವಾಗಿ ಆಗಮನ– ನಿರ್ಗಮನ ಪಥ ನಿರ್ಮಾಣವಾಗಿಲ್ಲ.

ನಗರ, ಪಟ್ಟಣ ಹಾಗೂ ಪ್ರಮುಖ ಹಳ್ಳಿಗಳ ಸಂಪರ್ಕಕ್ಕೆ ಸಣ್ಣ ಕಂಬಗಳನ್ನು ನೆಟ್ಟು ತಾತ್ಕಾಲಿಕವಾಗಿ ತಿರುವು ಪಡೆಯುವ ಪಥ ನಿರ್ಮಿಸಲಾಗಿದೆ. ಅದ
ರಿಂದಲೇ ಅಪಘಾತಗಳು ಹೆಚ್ಚುತ್ತಿವೆ. ‘ಪ್ರಾಧಿಕಾರದ ಅಧಿಕಾರಿಗಳು ‌ಕ್ರಮ ಕೈಗೊಂಡಿಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆದ್ದಾರಿಯಲ್ಲಿ ಅತೀ ವೇಗವಾಗಿ ಬರುವ ವಾಹನ ಚಾಲಕರಿಗೆ ಅಲ್ಲಿ ಸರ್ವೀಸ್‌ ರಸ್ತೆಯ ತಿರುವಿದೆ‌‌ ಎಂಬುದೇ ತಿಳಿಯುವುದಿಲ್ಲ. ಸರ್ವೀಸ್‌ ರಸ್ತೆಯಿಂದ ಹೆದ್ದಾರಿಗೆ ವಾಹನಗಳು ಪ್ರವೇಶ ಪಡೆದ ಕೂಡಲೇ ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುತ್ತಿವೆ.

ಹೆದ್ದಾರಿಯಿಂದ ಸರ್ವೀಸ್‌ ರಸ್ತೆಗೆ ತಿರುವು ತೆಗೆದುಕೊಳ್ಳುವಾಗಲೂ ಇದೇ ಅಪಾಯಕಾರಿ ಪರಿಸ್ಥಿತಿ ಇದೆ. ವೇಗವಾಗಿ ಬರುವಾಗ ತಕ್ಷಣ ಎಡಕ್ಕೆ ತಿರುಗಿಸಿ
ಕೊಳ್ಳಲು ಬ್ರೇಕ್‌ ಹಾಕಿದಾಗ ಹಿಂದಿ
ನಿಂದ ಬರುವ ವಾಹನಗಳು ಡಿಕ್ಕಿ ಹೊಡೆ
ಯುತ್ತಿವೆ. ಜಿಲ್ಲಾ ವ್ಯಾಪ್ತಿಯಲ್ಲಿ
ಶ್ರೀರಂಗಪಟ್ಟಣ, ತೂಬಿನಕೆರೆ, ಇಂಡುವಾಳು, ಹಳೇಬೂದನೂರು, ಅಮರಾವತಿ ಹೋಟೆಲ್‌, ಗೆಜ್ಜಲಗೆರೆ ಸೇರಿ 9 ಕಡೆ ಅಪಾಯಕಾರಿ ತಿರುವುಗಳಿವೆ.

ಕಳೆದೆರಡು ತಿಂಗಳಲ್ಲಿ ಮಂಡ್ಯ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ನಡೆದ 9 ಅಪಘಾತಗಳಲ್ಲಿ ಐವರು ಮೃತಪಟ್ಟಿದ್ದಾರೆ. ಸಾವು, ತೀವ್ರ ಗಾಯವಾದ ಪ್ರಕರಣಗಳಷ್ಟೇ ವರದಿಯಾಗುತ್ತಿವೆ.

‘ಹಳೇಬೂದನೂರು, ಗೆಜ್ಜಲಗೆರೆ, ಕಾಮತ್‌ ಹೋಟೆಲ್‌ ಬಳಿಯ ತಿರುವಿನಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಹಲವು ಪ್ರಕರಣಗಳಲ್ಲಿ ವಾಹನಗಳು ನಜ್ಜುಗುಜ್ಜಾಗುತ್ತಿವೆ. ಹಲವು ಚಾಲಕರು ದೂರು ನೀಡದೇ ತೆರಳುತ್ತಿದ್ದಾರೆ’ ಎಂದು ಹಳೇಬೂದನೂರು ಗ್ರಾಮದ ರಮೇಶ್‌ ಹೇಳಿದರು.

ತಾತ್ಕಾಲಿಕವಾಗಿ ಹಾಕಿರುವ ಫೈಬರ್‌ ಕಂಬಗಳು ಎರಡೂವರೆ ಅಡಿ ಎತ್ತರವಷ್ಟೇ ಇದ್ದು ಚಾಲಕರಿಗೆ ಸರಿ
ಯಾಗಿ ಕಾಣಿಸುತ್ತಿಲ್ಲ. ಕೆಲವರು ‌ಆ ಕಂಬಗಳಿಗೇ ವಾಹನ ಗುದ್ದಿಸಿಕೊಂಡು ತೆರಳುತ್ತಿದ್ದಾರೆ. ಹಲವೆಡೆ ಅವು ‌ರಸ್ತೆಯಲ್ಲಿ ಬಿದ್ದಿವೆ. ಈ ತಾತ್ಕಾಲಿಕ ಪಥ ನಿರ್ವಹಣೆಗೆ ‌ಸಿಬ್ಬಂದಿಯೂ ಇಲ್ಲ.

‘ಗ್ರಾಮಸ್ಥರು, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಕೇಳಿದೆಡೆಯೆಲ್ಲಾ ತಾತ್ಕಾಲಿಕವಾಗಿ ಆಗಮನ– ನಿರ್ಗಮನ ಪಥ ನೀಡಲಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಅಧಿಕೃತವಾಗಿ ಆಗಮನ– ನಿರ್ಗಮನ ಪಥ ನಿರ್ಮಾಣ
ವಾಗುವವರೆಗೂ ಸಮಸ್ಯೆ ಹೀಗೇ ಇರಲಿದೆ. ಟೋಲ್‌ ಆರಂಭವಾದ ನಂತರ ಕೆಲವು ಪಥಗಳನ್ನು ಸ್ಥಗಿತ
ಗೊಳಿಸಲಾಗುವುದು’ ಎಂದು ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಪ್ರತಿಕ್ರಿಯೆಗಾಗಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್‌ ಅವರಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT