ನಾಗಮಂಗಲ: ದೇಶದಲ್ಲಿ ಕೊಟ್ಟ ಮಾತಿನಂತೆ ಮತ್ತು ನುಡಿದಂತೆ ನಡೆಯುವ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರವೇ ಆಗಿದ್ದು, ನಾವು ನೀಡಿದ ಭರವಸೆಗಳು ಪೂರೈಸುತ್ತಿರುವುದನ್ನು ನೋಡಿ ವಿರೋಧಿಗಳಿಗೆ ಹೃದಯಾಘಾತವಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾರರಿಗೆ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ರಚನೆಯಾದ 10 ದಿನಕ್ಕೂ ಮುಂಚೆಯೇ ಮೈಷುಗರ್ ಕಾರ್ಖಾನೆಗೆ 50 ಕೋಟಿ ಅನುದಾನ ಬಿಡುಗಡೆಗೊಳಿಸಿ ಮಾತನ್ನು ಉಳಿಸಿಕೊಂಡಿದೆ ಎಂದರು.
ಅಲ್ಲದೇ ನಿಮ್ಮ ಆಶೀರ್ವಾದದಿಂದ ನನಗೆ ಸಚಿವ ಸ್ಥಾನ ಲಭ್ಯವಾಗಿದೆ. ಜೊತೆಗೆ ಹಿಂದೆ ಅಧಿಕಾರದಲ್ಲಿದ್ದಾಗಲೂ ಸಹ ತಾಲ್ಲೂಕಿನಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ ಎಂದು ಕಾರ್ಯಕರ್ತರಿಗೆ ತಮ್ಮ ಜವಾಬ್ದಾರಿಗಳನ್ನು ಕುರಿತು ಮನವರಿಕೆ ಮಾಡಿದರು.
ತಾಲ್ಲೂಕಿನ ನೆಲ್ಲಿಗೆರೆ ಟೋಲ್ ಬಳಿ ಬೆಳಿಗ್ಗೆಯಿಂದಲೇ ಸೇರಿದ್ದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಸ್ವಾಗತ ಸ್ವೀಕರಿಸಿದರು. ಬೆಳ್ಳೂರು ಕ್ರಾಸ್ ನಲ್ಲಿ ಕ್ಯಾರೆಟ್, ಮೂಲಂಗಿ ಮತ್ತು ದಪ್ಪಮೆಣಸಿನಕಾಯಿಗಳಿಂದ ಮಾಡಿದ ಬೃಹತ್ ಹಾರ ಹಾಕುವ ಮೂಲಕ ಕಾರ್ಯಕರ್ತರು ಅಭಿಮಾನವನ್ನು ವ್ಯಕ್ತಪಡಿಸಿದರು. ನಂತರ ಬೆಳ್ಳೂರು ಕ್ರಾಸ್ ನಿಂದ ನಾಗಮಂಗಲ ಪಟ್ಟಣಕ್ಕೆ ತೆರೆದ ವಾಹನದಲ್ಲಿ ಸಾಗಿದ ಸಚಿವರಿಗೆ ಹೆದ್ದಾರಿ ಬದಿಯ ಗ್ರಾಮಗಳ ಗ್ರಾಮಸ್ಥರು ಸ್ವಾಗತಕೋರಿ ಹಾರ ಹಾಕಿ ಸನ್ಮಾನಿಸಿದರು. ನಂತರ ತಾಲ್ಲೂಕು ಆಡಳಿತ ಸೌಧಕ್ಕೆ ತೆರಳಿದ ಸಚಿವರು ಆವರಣದಲ್ಲಿರುವ ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಪಟ್ಟಣದ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಜನಾಂಗದ ಮುಖಂಡರು ಚಲುವರಾಯಸ್ವಾಮಿ ಅವರಿಗೆ ಬೆಳ್ಳಿಗದೆಯನ್ನು ನೀಡಿ ಸನ್ಮಾನಿಸಿದರು.
ಧನಲಕ್ಷ್ಮಿ ಚಲುವರಾಯಸ್ವಾಮಿ , ಸಚಿನ್ ಚಲುವರಾಯಸ್ವಾಮಿ, ಲಕ್ಷ್ಮಿಕಾಂತ್,ಕಾಂಗ್ರೆಸ್ ಮುಖಂಡರಾದ ಸುನೀಲ್ ಲಕ್ಷ್ಮೀಕಾಂತ್, ಹೆಚ್.ಟಿ.ಕೃಷ್ಣೇಗೌಡ, ರಾಜೇಗೌಡ, ಪುಟ್ಟಮ್ಮ ಮಾಯಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಚಿದಾನಂದ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಕೆಪಿಸಿಸಿ ಸದಸ್ಯ ಕೊಣನೂರು ಹನುಂಮತು, ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶರತ್ ರಾಮಣ್ಣ, ವಕೀಲ ಕೊಣನೂರು ಧನಂಜಯ್ ಸೇರಿದಂತೆ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.