ದೇವಾಲಯದ ಗರ್ಭಗುಡಿಯನ್ನು ಕ್ಯಾರೆಟ್, ಮೂಲಂಗಿ, ಹಾಗಲಕಾಯಿ ಇತರ ತರಕಾರಿಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭವಾದವು. ದೇವಾಲಯದ ಪ್ರಧಾನ ಅರ್ಚಕ ಕೆ.ಎಸ್. ಲಕ್ಷ್ಮೀಶ್ ಶರ್ಮಾ ಮತ್ತು ವೈದಿಕರಾದ ರಘುರಾಮ ಶರ್ಮಾ ಅವರ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಅರ್ಚನೆ, ಸಪ್ತಶತಿ, ಸಹಸ್ರನಾಮ, ಖಡ್ಗಮಾಲಾ ಇತರ ವಿಧಿ, ವಿಧಾನಗಳು ಜರುಗಿದವು. ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಮಹಿಳೆಯರು ಬೆಲ್ಲ ಮತ್ತು ನಿಂಬೆಹಣ್ಣಿನ ಆರತಿ ಬೆಳಗಿದರು. ಪಟ್ಟಣ ಮಾತ್ರವಲ್ಲದೆ ಆಸುಪಾಸಿನ ಗ್ರಾಮಗಳ ಭಕ್ತರು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.