ನಾಗಮಂಗಲ: ಎರಡು ವರ್ಷಗಳಿಂದ ಕಾಡುತ್ತಿರುವ ಕೊರೊನಾದಿಂದಾಗಿ ಗಣೇಶ ಮೂರ್ತಿಗಳ ಬೆಲೆ ಏರಿಕೆಯಾಗಿದ್ದು, ಭಕ್ತರಿಗೆ ಬೇಸರ ತಂದಿದೆ.
ತಾಲ್ಲೂಕಿನ ಬಹುತೇಕ ರಸ್ತೆಗಳಲ್ಲಿ ಪ್ರತಿ ವರ್ಷವೂ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರು ವಿಜೃಂಭಣೆಯಿಂದ ಹಬ್ಬ ಆಚರಿಸುತ್ತಿದ್ದರು. ಆದರೆ ಈ ಬಾರಿ ಸರ್ಕಾರದ ಕೋವಿಡ್ ಮಾರ್ಗಸೂಚಿಯಿಂದಾಗಿ ಗಣೇಶನನ್ನು ಪ್ರತಿಷ್ಠಾಪಿಸಲು ಭಕ್ತರು ನಿರಾಸಕ್ತಿ ತಳೆದಿದ್ದಾರೆ. ಮಾರುಕಟ್ಟೆಯಲ್ಲಿ ಮೂರ್ತಿಗಳನ್ನು ಖರೀದಿಸಲು ಬರುವವರ ಸಂಖ್ಯೆಯೂ ಕಡಿಮೆಯಾಗಿದೆ.
ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಪರಿಸರಸ್ನೇಹಿ ಮಣ್ಣಿನ ಮೂರ್ತಿಗಳನ್ನು ಖರೀದಿಸಲು ಮುಂದಾಗಿದ್ದು, ಬಹುತೇಕ ಗ್ರಾಹಕರ ದೃಷ್ಟಿ ಬಣ್ಣಬಣ್ಣದ ಮೂರ್ತಿಗಳ ಕಡೆಗೇ ಇತ್ತು.
ಈ ಬಾರಿ ಮೂರ್ತಿಗಳ ಪೂರೈಕೆ ಕಡಿಮೆಯಾಗಿ ಬೆಲೆ ಹೆಚ್ಚಾಗಿದ್ದು, ಕೇವಲ ಒಂದು ಲೋಡ್ ಮೂರ್ತಿಗಳನ್ನು ತಂದಿದ್ದೇವೆ. ಅವುಗಳನ್ನು ಖರೀದಿಸಲೂ ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಿ ರವಿ ಹೇಳಿದರು.
ಆಕರ್ಷಕವಾದ ಮತ್ತು ವಿಭಿನ್ನವಾದ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಬರದಿರುವುದು ಈ ಬಾರಿ ನಿರಾಸೆಗೆ ಕಾರಣವಾಗಿದೆ. ಪುಟ್ಟ ಗಣೇಶ ಮೂರ್ತಿಗಳಿಗೇ ಹೆಚ್ಚಿನ ಹಣ ನಿಗದಿ ಮಾಡಲಾಗಿದ್ದು, ಹಬ್ಬದ ಉತ್ಸಾಹವನ್ನು ಕಡಿಮೆ ಮಾಡಿದೆ ಎಂದು ಪಟ್ಟಣದ ಚಂದನ್ ಹೇಳಿದರು.
ಗೌರಿ ಗಣೇಶ ಹಬ್ಬದ ಆಚರಣೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ದಿನಸಿ ಅಂಗಡಿ ಸೇರಿದಂತೆ ಬಟ್ಟೆ ಅಂಗಡಿ, ಒಡವೆ ಅಂಗಡಿ, ಹಣ್ಣಿನ ಅಂಗಡಿಗಳಲ್ಲಿ ಜನದಟ್ಟಣೆ ಕಂಡುಬಂತು. ಜನರು ವಸ್ತುಗಳನ್ನು ಖರೀದಿಸುವಾಗ ಗುಂಪುಗೂಡಿದ್ದರು. ಕೋವಿಡ್ ನಿಯಮ ಉಲ್ಲಂಘಿಸುತ್ತಿರುವವರ ವಿರುದ್ಧ ಪುರಸಭೆ ಅಧಿಕಾರಿಗಳೂ ಕ್ರಮ ವಹಿಸಲಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.