ಮಳವಳ್ಳಿ: ಬಾಡಿಗೆದಾರರು ಬಾಡಿಗೆ ಪಾವತಿಸಿಲ್ಲ ಎಂದು ಆರೋಪಿಸಿ ಸುಳ್ಳು ದೂರು ನೀಡಿದ್ದ ವ್ಯಕ್ತಿಗೆ ಇಲ್ಲಿನ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ಎಂ.ಬಾಲಕೃಷ್ಣ ಅವರು ₹50 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ.
ಬೆಳಕವಾಡಿ ಗ್ರಾಮದ ನಿವಾಸಿ ಅಕ್ರಂಪಾಷ ಅವರೇ ದಂಡದ ಶಿಕ್ಷೆಗೆ ಒಳಗಾದವರು.
‘ಇದೇ ಗ್ರಾಮದ ನಾಗರತ್ನಮ್ಮ ಮತ್ತು ಮಹದೇವಸ್ವಾಮಿ ಅವರು ನನ್ನ ಮನೆಯಲ್ಲಿ ಬಾಡಿಗೆಗೆ ಇದ್ದಾರೆ. ಅವರು ಬಾಡಿಗೆ ನೀಡುತ್ತಿಲ್ಲ’ ಎಂದು ಅಕ್ರಂಪಾಷಾ 2019ರ ಫೆಬ್ರುವರಿಯಲ್ಲಿ ಬೆಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
‘ಈ ಮನೆ ನಮಗೆ ಸೇರಿದ್ದು’ ಎಂದು ನಾಗರತ್ನಮ್ಮ ಹಾಗೂ ಮಹದೇವಸ್ವಾಮಿ ಅವರು ಮನೆಯ ಮೂಲ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಧೀಶರು ದೂರುದಾರರಿಗೆ ದಂಡ ವಿಧಿಸಿದ್ದಾರೆ.
ದೂರುದಾರ ಅಕ್ರಂಪಾಷ ಪರ ಎಚ್.ಪಿ ರಮೇಶ್ ಹಾಗೂ ನಾಗರತ್ನಮ್ಮ ಮತ್ತು ಮಹದೇವಸ್ವಾಮಿ ಪರ ಎನ್.ಎನ್ ಶಿವಪ್ಪ ವಾದ ಮಂಡಿಸಿದ್ದರು.