ಪಟ್ಟಣದ 8 ನೇ ವಾರ್ಡ್ ನ ಪೇಟೆಹೊಲದ ನಿವಾಸಿಯಾಗಿದ್ದ ತೆಂಗಿನಭಾಗ ಗ್ರಾಮದ ಸ್ವಾಮಿ ಎಂಬುವರ ಪುತ್ರ ನರಸಿಂಹ(35) ಮನೆಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಯಾರೂ ಇಲ್ಲದ ಸಮಯದಲ್ಲಿ ಪತ್ನಿ ಕೀರ್ತನಾ (23) ಮಕ್ಕಳಾದ ಜಯಸಿಂಹ( 3) ಮತ್ತು ರಿಷಿಕಾ(1)ರಿಗೆ ವಿಷ ಉಣಿಸಿ ಕೊಲೆ ಮಾಡಿದ್ದಾನೆ. ಆರೋಪಿ ನರಸಿಂಹ ಮದುವೆಯಾಗಿ ಮಕ್ಕಳಿದ್ದರೂ ಸಹ ಬೇರೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದು, ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರವಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಪಟ್ಟಣದಲ್ಲಿ ಹೇರ್ ಸೆಲೂನ್ ಅಂಗಡಿಯನ್ನು ಇಟ್ಟುಕೊಂಡಿದ್ದ ಆರೋಪಿ ನರಸಿಂಹ ಕಳೆದ ಕೆಲ ವರ್ಷದ ಹಿಂದೆ ಬಸರಾಳು ಹೋಬಳಿಯ ಕಂಬದಹಳ್ಳಿ ಗ್ರಾಮದ ಶಿವನಂಜು ಎಂಬುವರ ಪುತ್ರಿ ಕೀರ್ತನಾಳನ್ನು ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. ಗುರುವಾರ ಮಧ್ಯಾಹ್ನ ಮನೆಯಲ್ಲಿ ಪತ್ನಿ ಮತ್ತು ಮಕ್ಕಳಿಗೆ ವಿಷ ಉಣಿಸಿದ ಕೊಂದು ಯಾರಿಗೂ ಸಂದೇಹ ಬರದಿರಲಿ ಎಂದು ತಾನು ಸಹ ಅಲ್ಪ ಪ್ರಮಾಣದಲ್ಲಿ ವಿಷ ಸೇವನೆ ಮಾಡಿದ್ದು, ಮಂಡ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.