ಮಂಡ್ಯ: ಕೆಆರ್ಎಸ್ ಜಲಾಶಯ ಕಳೆದ ವರ್ಷ ತಡವಾಗಿ ಭರ್ತಿಯಾದ ಕಾರಣ ಈ ವರ್ಷ ಬೇಸಿಗೆಯಲ್ಲೂ ನೀರಿನ ಮಟ್ಟ 100 ಅಡಿ ಗಡಿ ಕಾಯ್ದುಕೊಂಡಿದೆ. ಸದ್ಯ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ.
ಬುಧವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 100.95 ಅಡಿ ದಾಖಲಾಗಿತ್ತು. 5,396 ಕ್ಯುಸೆಕ್ ಒಳಹರಿವು, 1,065 ಕ್ಯುಸೆಕ್ ಒಳಹರಿದು ಇದೆ. ಕಳೆದ ವರ್ಷ ಇದೇ ವೇಳೆಗೆ 86.80 ಅಡಿ ನೀರು ಸಂಗ್ರಹವಿತ್ತು, ಅಕ್ಟೋಬರ್ 2ರಂದು ಗರಿಷ್ಠ 124.80 ಅಡಿ ತಲುಪಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಿದ್ದರು.
ತಡವಾಗಿ ಭರ್ತಿಯಾಗಿದ್ದ ಕಾರಣ ಇಳಿಮುಖವಾಗುತ್ತಾ ಬಂದಿದ್ದ ನೀರಿನ ಮಟ್ಟ ಏಪ್ರಿಲ್ 30ರಂದು 99.50 ಅಡಿಗೆ ಬಂದಿತ್ತು, ಮೇ 25ರಂದು ಮತ್ತೆ 100 ಅಡಿಗೆ ತಲುಪಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ದಾರಾಕಾರ ಮಳೆ ಸುರಿಯುತ್ತಿರುವ ಕಾರಣ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.
‘ಈ ವರ್ಷ ಬೇಸಿಗೆಯಲ್ಲೂ ಉತ್ತಮ ನೀರಿನ ಸಂಗ್ರಹವಿದೆ. ಕಟ್ಟು ಪದ್ಧತಿಯಲ್ಲಿ ರೈತರ ಬೆಳೆಗಳಿಗೂ ನೀರು ಹರಿಸಲಾಗುತ್ತಿದೆ. ಕಡಿಮೆಯಾಗುತ್ತಿದ್ದ ನೀರಿನ ಮಟ್ಟ ಮಳೆಯ ಕಾರಣದಿಂದ ಹೆಚ್ಚಾಗುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದರು.
ಕೆಆರ್ಎಸ್ ಜಲಾಶಯದ ನೀರಿನ ಮಟ್ಟ
ಗರಿಷ್ಠ ಮಟ್ಟ: 124.80
ಇಂದಿನ ಮಟ್ಟ: 100.95 ಅಡಿ
ಒಳಹರಿವು: 5396 ಕ್ಯುಸೆಕ್
ಹೊರಹರಿವು: 1065 ಕ್ಯುಸೆಕ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.