ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಕೆರೆ ಬಯಲಿನ ರೈತರಿಗೆ ತುರಿಕೆ ಕಾಟ

ಬಟ್ಟೆ ಒಗೆಯುವ ಮಹಿಳೆಯರಿಗೂ ಚರ್ಮವ್ಯಾದಿ, ರೈತರ ಗೋಳು ಕೇಳುವವರಾರು?
Published 7 ಏಪ್ರಿಲ್ 2024, 7:02 IST
Last Updated 7 ಏಪ್ರಿಲ್ 2024, 7:02 IST
ಅಕ್ಷರ ಗಾತ್ರ

ಮಂಡ್ಯ: ದುರ್ವಾಸನೆಯುಕ್ತ ಕೊಳಚೆ ನೀರು ಗುತ್ತಲು ಕೆರೆ ಅಚ್ಚುಕಟ್ಟು ಪ್ರದೇಶದ ಗದ್ದೆಗಳಿಗೆ ಹರಿಯುತ್ತಿದ್ದು ಕೃಷಿ ಕೆಲಸ ಮಾಡುವ ರೈತರು ತುರಿಕೆ ಕಾಟದಿಂದ ಕಂಗಾಲಾಗಿದ್ದಾರೆ. ವಿಷಯುಕ್ತ ನೀರಿನಿಂದಾಗಿ ಬೆಳೆಯೂ ಹಾಳಾಗುತ್ತಿದ್ದು ರೈತರ ಗೋಳು ಕೇಳುವವರು ಇಲ್ಲವಾಗಿದ್ದಾರೆ.

ಕೊಳಚೆ ನೀರು ಕೆರೆಗೆ ಸೇರ್ಪಡೆಯಾಗುತ್ತಿರುವ ಕಾರಣ ನೀರಿನ ಶುದ್ಧತಾ ಗುಣ (ಪಿಎಚ್‌ ವ್ಯಾಲ್ಯು) ಹಾಳಾಗಿದೆ. ಬೇಸಿಗೆಯಿಂದಾಗಿ ನಾಲೆಗಳಲ್ಲಿ ನೀರು ಹರಿಯದ ಕಾರಣ ಸ್ಥಳೀಯ ಹಳ್ಳಿಗಳ ಜನರು ಜಾನುವಾರುಗಳಿಗೆ ನೀರು ಕುಡಿಸಲು, ಮಹಿಳೆಯರು ಬಟ್ಟೆ ಒಗೆಯಲು ಗುತ್ತಲು ಕೆರೆ ನೀರನ್ನೇ ಅವಲಂಬಿಸಿದ್ದರು. ಆದರೆ ಈಗ ನೀರು ಕಲುಷಿತಗೊಂಡಿರುವ ಕಾರಣ ಚರ್ಮವ್ಯಾದಿ ಕಾಣಿಸಿಕೊಂಡಿದೆ.

ಕೆರೆ ಅಚ್ಚುಕಟ್ಟಿನಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಕಬ್ಬು, ಭತ್ತ ಬೆಳೆದಿದ್ದಾರೆ. ಬರಗಾಲದಿಂದಾಗಿ ರೈತರು ನೀರಿನ ಕೊರತೆ ಎದುರಿಸುತ್ತಿದ್ದಾರೆ. ಬೆಳೆ ಉಳಿಸಿಕೊಳ್ಳುವ ಅನಿವಾರ್ಯತೆಯಿಂದಾಗಿ ಕೊಳಚೆ ನೀರನ್ನೇ ಹೊಲಗಳಿಗೆ ಹಾಯಿಸುತ್ತಿದ್ದಾರೆ. ನೀರು ಕಾಲು, ಕೈಗಳಿಗೆ ಸ್ಪರ್ಶಿಸುವ ಕಾರಣ ರೈತರಿಗೆ ಕಜ್ಜಿಯಂತಹ ತುರಿಕೆ ತೀವ್ರಗೊಳ್ಳುತ್ತಿದೆ.

‘ಕೈ, ಕಾಲಿನ ಸಂದುಗಳಲ್ಲಿ ಸಣ್ಣ ಗುಳ್ಳೆಗಳು ಕಾಣಿಸಿಕೊಂಡಿವೆ. ಜೊತೆಗೆ ಕಾಲಿನ ಚರ್ಮ ಪದರು ಪದರಾಗಿ ಮೇಲೆದ್ದು ಬರುತ್ತಿದೆ. ಇದಕ್ಕೆ ಗುತ್ತಲು ಕೆರೆ ನೀರು ವಿಷಯುಕ್ತವಾಗಿರುವೇ ಕಾರಣ. ಭಯ ಕಾಡುತ್ತಿದ್ದು ಮುಂದೇನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ’ ಎಂದು ಗುತ್ತಲಿನ ರೈತ ಉಮೇಶ್‌ ಮಾದಾರಿ ತಿಳಿಸಿದರು.

ಕೊಳಚೆಯಲ್ಲಿ ಇಂಗಾಲ ಡೈ ಆಕ್ಸೈಡ್‌, ಆ್ಯಸಿಡ್‌ ಅಂಶ ಹೆಚ್ಚಿರುವ ಕಾರಣ ರೈತರ ಬೆಳೆಗಳೂ ಸುಟ್ಟು ಹೋಗುತ್ತಿವೆ. ಕಾಯಿ ಕಟ್ಟುವ ಹಂತಕ್ಕೆ ತಲುಪಿರುವ ಭತ್ತ ಜೊಳ್ಳಾಗುತ್ತಿದೆ. ಹೀಗಾಗಿ ಬೆಳೆನಷ್ಟ ಭೀತಿ ಎದುರಿಸುತ್ತಿರುವ ರೈತರು ಆತಂಕಕ್ಕೀಡಾಗಿದ್ದಾರೆ.

ಕೆರೆ ಹಿಂಭಾಗದಲ್ಲಿ ಸಣ್ಣ, ಪುಟ್ಟ ಕಾಲುವೆಯಲ್ಲಿ ಹರಿಯುವ ನೀರು ಕೂಡ ಕಲುಷಿತಗೊಂಡಿದ್ದು ಬಟ್ಟೆ ಹೊಗೆಯುವ ಮಹಿಳೆಯರಿಗೂ ಚರ್ಮದ ಸಮಸ್ಯೆಗಳು ಕಾಣಿಸಿಕೊಂಡಿವೆ. ಕೊಳಚೆ ನೀರಿನಲ್ಲಿ ಒಗೆದ ಬಟ್ಟೆ ಧರಿಸಿದರೂ ತುರಿಕೆ ಕಾಡುತ್ತಿದ್ದು ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಕೆರೆ ನೀರು ಕುಡಿದು ಆಡು– ಕುರಿ ಮೃತಪಟ್ಟ ನಂತರ ರೈತರು ಜಾನುವಾರುಗಳಿಗೆ ಕೆರೆ ನೀರು ಕುಡಿಸುವುದನ್ನು ಸ್ಥಗಿತೊಳಿಸಿದ್ದಾರೆ.

‘ಕೆರೆ ಅಕ್ಕಪಕ್ಕದಲ್ಲಿ ಮೇಯುವ ದನಕರುಗಳು ಅಪ್ಪಿತಪ್ಪಿ ಕೆರೆಗೆ ಬಂದು ನೀರು ಕುಡಿದರೆ ಏನು ಗತಿ ಎಂದು ಅವುಗಳನ್ನು ಕಾಯುವುದೇ ಸಾಹಸದ ಕೆಲಸವಾಗಿದೆ. ಕೆರೆಯ ಹೂಳೆತ್ತಿ ಪರಿಸರ ಸ್ವಚ್ಛಗೊಳಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಯತ್ತಗದಹಳ್ಳಿಯ ರಾಮೇಗೌಡ ಬೇಸರ ವ್ಯಕ್ತಪಡಿಸಿದರು.

ಯೋಜನೆ ಜಾರಿ ಯಾವಾಗ?: ನಗರದ ಕೊಳಚೆ ನೀರು ನೇರವಾಗಿ ಕೆರೆ ಸೇರದೆ ಕೊಳಚೆ ಶುದ್ಧೀಕರಣ ಘಟಕ ಸೇರುವಂತೆ ಹೊಸ ಯೋಜನೆ ಸಿದ್ಧಗೊಂಡು ಹಲವು ವರ್ಷಗಳೇ ಕಳೆದಿವೆ. ಮಂಡ್ಯ ಸಮಗ್ರ ಅಭಿವೃದ್ಧಿ ನಿಧಿಯಿಂದ ಹಣ ಕೂಡ ಮೀಸಲಾಗಿತ್ತು. ಆದರೆ ಆ ಹಣ ವಾಪಸ್‌ ಹೋಗಿರುವ ಕಾರಣ ಯೋಜನೆ ನನೆಗುದಿಗೆ ಬಿದ್ದಿದೆ.

‘ಗುತ್ತಲು ಕೆರೆ ಅಭಿವೃದ್ಧಿಗೆ ಹೊಸ ಯೋಜನೆ ಸಿದ್ಧಗೊಂಡಿದ್ದು ಹಣ ಬಿಡುಗಡೆಯಾದರೆ ಕೆರೆಗೆ ಕೊಳಚೆ ನೀರು ಹರಿಯುವುದನ್ನು ತಪ್ಪಿಸಲಾಗುವುದು’ ಎಂದು ನಗರಸಭೆ ಅಧಿಕಾರಿಯೊಬ್ಬರು ತಿಳಿಸಿದರು.

ಕೆರೆ ಬಯಲಲ್ಲಿ ಸುಟ್ಟು ಹೋಗುತ್ತಿರುವ ಭತ್ತ, ಕಬ್ಬು ಬಟ್ಟೆ ಒಗೆಯುವ ಮಹಿಳೆಯರಿಗೂ ರೋಗಭೀತಿ ಗುತ್ತಲು ಕೆರೆ ಅಭಿವೃದ್ಧಿ ಕಾಮಗಾರಿ ಯಾವಾಗ?

ಹೂಳೆತ್ತಿ ಎಷ್ಟು ವರ್ಷವಾಯ್ತು? ಇಡೀ ಗುತ್ತಲು ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದು ನೀರಿನ ಸಂಗ್ರಹ ಸಾಮರ್ಥ್ಯ ತಗ್ಗಿದೆ. ಕೆರೆಯ ಹೂಳೆತ್ತಿ ಕೆರೆ ಸುತ್ತಲಿನ ಭಾಗವನ್ನು ಅಭಿವೃದ್ಧಿಗೊಳಿಸಬೇಕು. ಉದ್ಯಾನದ ರೂಪದಲ್ಲಿ  ಸ್ಥಳೀಯರು ವಿಹಾರ ಮಾಡುವ ವಾತಾವರಣ ಸೃಷ್ಟಿಸಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ. ‘ಒಂದು ಕಾಲದಲ್ಲಿ ಗುತ್ತಲು ಕರೆಯ ಮೀನು ಎಂದರೆ ಮಂಡ್ಯ ಜಿಲ್ಲೆಯಲ್ಲಿ ಬಹಳ ಪ್ರಸಿದ್ಧಿ ಪಡೆದಿತ್ತು. ದೂರದ ಊರುಗಳಿಂದ ಬಂದು ಅಲ್ಲಿಯ ಮೀನು ಖರೀದಿ ಮಾಡುತ್ತಿದ್ದರು. ಆದರೆ ಈಗ ಅಲ್ಲಿ ಇಡೀ ಪರಿಸರ ಕಲುಷಿತಗೊಂಡಿದ್ದು ಕೆರೆಯ ಇತಿಹಾಸವೇ ಹಾಳಾಗಿದೆ. ಕೆರೆಯ ಅಭಿವೃದ್ಧಿಗೆ ಒಂದು ವಿಸ್ತ್ರತ ಯೋಜನೆ ಜಾರಿಗೊಳಿಸಬೇಕು’ ಎಂದು ರೈತ ನಾಯಕ ಕೆ.ಬೋರಯ್ಯ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT