ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಮಳವಳ್ಳಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಕೆಎಸ್ಆರ್ಟಿಸಿ ಬಸ್ ಸಂಚಾರ ಎಂದಿನಂತಿದೆ.
ಮೈಸೂರು ರಸ್ತೆ, ಕೊಳ್ಳೇಗಾಲ ರಸ್ತೆ, ಮದ್ದೂರು ರಸ್ತೆಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು.
ಪ್ರಮುಖ ವಾಣಿಜ್ಯ ಕೇಂದ್ರ ಪೇಟೆ ಬೀದಿಯಲ್ಲಿನ ವರ್ತಕರು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ ಬಂದ್ ಬೆಂಬಲ ನೀಡಿದರು.
ಜೆಡಿಎಸ್ ಮುಖಂಡ ಕೆ.ಅನ್ನದಾನಿ ಮಾತನಾಡಿ ನೇತೃತ್ವದಲ್ಲಿ ಮೆರವಣಿಗೆ ನಡೆಯಿತು. 'ರಾಜ್ಯ ಸರ್ಕಾರದ ರೈತರ ಬಾಯಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದೆ. ನಮಗೆ ಕುಡಿಯಲು ಹಾಗೂ ನಿಂತಿರುವ ಬೆಳೆಗಳಿಗೆ ನೀರಿಲ್ಲದ ಸಂದರ್ಭದಲ್ಲಿ ನೀರು ಹರಿಸುತ್ತಿದೆ. ಕಳೆದ 25 ದಿನಗಳಿಂದ ನಿರಂತರವಾಗಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಖಂಡನೀಯ. ಇದೇ ರೀತಿ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದ್ದರೆ , ಮುಂದಿನ ದಿನಗಳಲ್ಲಿ ಇಂಥ ಕೆಟ್ಟ ಸರ್ಕಾರವನ್ನು ಕಿತ್ತು ಹಾಕಬೇಕಾಗುತ್ತದೆ' ಎಂದು ಅನ್ನದಾನಿ ಎಚ್ಚರಿಕೆ ನೀಡಿದರು.
'ಸುಪ್ರೀಂ ಕೋರ್ಟ್ ಎಲ್ಲಿಯೂ ನೀರು ಬಿಡುಗಡೆ ಮಾಡಿ ಎಂದು ಹೇಳಿಲ್ಲ, ಪ್ರಾಧಿಕಾರದಲ್ಲಿ ಇರುವ ವಿಚಾರವನ್ನು ಅಲ್ಲಿಯೇ ಬಗೆಹರಿಸಿಕೊಳ್ಳಿ ಎಂದಿದೆ. ಆದರೆ ರಾಜ್ಯ ಸರ್ಕಾರ ಜನರನ್ನು ದಿಕ್ಕು ತಪ್ಪಿಸುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಸದಸ್ಯರಾದ ಎಂ.ಟಿ.ಪ್ರಶಾಂತ್, ಟಿ.ನಂದ ಕುಮಾರ್, ಸಿದ್ದರಾಜು, ಕುಮಾರ್, ನಾಗೇಶ್, ರವಿ, ನೂರುಲ್ಲಾ, ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ, ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಎಚ್.ಕೆಂಪಯ್ಯ, ಎಂ.ಎನ್.ಚಿಕ್ಕರಾಜು, ಜಯ ಕರ್ನಾಟಕ ಸಂಘಟನೆಯ ನಾಗೇಶ್, ಕಾರ್ಯದರ್ಶಿ ಆನಂತ್, ಮುಖಂಡರಾದ ಅಪ್ಪಾಜಿಗೌಡ, ಆನಂದ್, ಕಿಟ್ಟಿ, ಉಮೇಶ್, ವೇಣು, ಪರಮೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.