ಶ್ರೀರಂಗಪಟ್ಟಣ: ಭಾನುವಾರ ಅರ್ಧ ತಾಸಿನಲ್ಲಿ ಮದುವೆ ನಡೆದಿದ್ದ ಕೆಆರ್ಎಸ್ನಲ್ಲಿ ಮತ್ತೊಂದು ಜೋಡಿಯ ಮದುವೆ ಸೋಮವಾರ ನಸುಕಿನಲ್ಲಿ ನಡೆಯಿತು.
ಕೆಆರ್ಎಸ್ನ ಹರೀಶ್– ರಾಜೇಶ್ವರಿ ದಂಪತಿಯ ಪುತ್ರಿ ಲಕ್ಷ್ಮಿ (ಬಿಂದು) ಮತ್ತು ಮೈಸೂರಿನ ಜ್ಯೋತಿ ಮತ್ತು ಶ್ವೇದನಾರಾಯಣ ದಂಪತಿ ಪುತ್ರ, ಸಾಫ್ಟ್ವೇರ್ ಎಂಜಿನಿಯರ್ ಲಕ್ಷ್ಮೀನಾರಾಯಣ ಅವರ ವಿವಾಹ ಮುಂಜಾನೆ 5 ಗಂಟೆ 5 ನಿಮಿಷಕ್ಕೆ ನಡೆಯಿತು.
ಮೈಸೂರಿನಲ್ಲಿ ಮಾರ್ಚ್ 30ರಂದು ಈ ಜೋಡಿಯ ಮದುವೆ ನಿಶ್ಚಯವಾಗಿತ್ತು. ಕೊರೊನಾ ವೈರಸ್ ಕಾರಣದಿಂದ ಮದುವೆಗೆ ಅವಕಾಶ ಸಿಗದ ಕಾರಣ ದಿಢೀರನೆ ಕೆಆರ್ಎಸ್ನ ಎಲ್ಲಮ್ಮದೇವಿ ದೇವಾಲಯದಲ್ಲಿ ಮದುವೆ ನಡೆಯಿತು. ವಧು ಮತ್ತು ವರನ ಪೋಷಕರು ಮತ್ತು ಬೆರಳೆಣಿಕೆಯಷ್ಟು ಬಂಧುಗಳು ಈ ಮದುವೆಯಲ್ಲಿ ಭಾಗವಹಿಸಿದ್ದರು.
‘ನಮ್ಮ ಮದುವೆ ಅದ್ದೂರಿಯಾಗಿ ನಡೆಯಲಿಲ್ಲ ಎಂದು ಬೇಸರವಿಲ್ಲ. ಕೊರೊನಾ ವೈರಸ್ ತಡೆಯಲು ಕಟ್ಟುನಿಟ್ಟಿನ ನಿರ್ಬಂಧ ಅನವಾರ್ಯ. ಹಾಗಾಗಿ ಸಂತೋಷದಿಂದ ಸರಳ ಮದುವೆ ಮಾಡಿಕೊಂಡಿದ್ದೇವೆ. ಕೊರೊನಾ ಬಗ್ಗೆ ನಾವೂ ಜಾಗೃತಿ ಮೂಡಿಸುತ್ತೇವೆ’ ಎಂದು ನವ ದಂಪತಿ ಹೇಳಿದರು.