ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೂಲ್ಯ ಮತ ಆಮಿಷಕ್ಕೆ ಬಲಿಯಾಗದಿರಲಿ: ನಟ ನೀನಾಸಂ ಸತೀಶ್‌

Last Updated 13 ಏಪ್ರಿಲ್ 2023, 13:23 IST
ಅಕ್ಷರ ಗಾತ್ರ

ಮಂಡ್ಯ: ‘ಮತದಾನ ಬಹಳ ಅಮೂಲ್ಯವಾದುದು, ಅದು ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗಬಾರದು. ಪ್ರತಿಯೊಬ್ಬರೂ ಪವಿತ್ರ ಮತದಾನದಲ್ಲಿ ಭಾಗವಹಿಸಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಮಂಡ್ಯ ಮತದಾನ ಜಾಗೃತಿಯ ರಾಯಭಾರಿಯಾಗಿರುವ ನಟ ನೀನಾಸಂ ಸತೀಶ್ ಹೇಳಿದರು.

ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದದಲ್ಲಿ ಸ್ವೀಪ್‌ (ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಭಾಗವಹಿಸುವಿಕೆ ಸಮಿತಿ) ಚಟುವಟಿಕೆ ಅಂಗವಾಗಿ ಗುರುವಾರ ನಡೆದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲಿಯವರೆಗೆ ಮತದಾರರು ಜಾಗೃತರಾಗುವುದಿಲ್ಲವೋ ಅಲ್ಲಿಯವರೆಗೆ ಕೆಟ್ಟ ಹಾಗೂ ಭ್ರಷ್ಟ ರಾಜಕಾರಣ ವ್ಯವಸ್ಥೆ ತೊಲಗಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ನಾನ್ಯಾಕೆ ಮತದಾನ ಮಾಡಬೇಕು ಎಂಬ ಮನೋಭಾವನೆ ಬೇಡ, ಪ್ರತಿಯೊಬ್ಬರೂ ಲೋಕದ ಜ್ಞಾನ ತಿಳಿದುಕೊಳ್ಳಬೇಕು. ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು’ ಎಂದರು.

‘ಒಂದೊಂದು ಮತಕ್ಕೂ ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿಯಿದೆ. ಆದ್ದರಿಂದ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಬಾರದು. ಯೋಗ್ಯ ವ್ಯಕ್ತಿ ನೋಡಿ ಮತ ಹಾಕಬೇಕು. ಯಾರು ಗೆದ್ದರೆ ನನಗೇನು ಎಂದು ಸುಮ್ಮನೆ ಕೂರಬಾರದು. ಇದರಿಂದ ಕೆಟ್ಟ ಹಾಗೂ ಭ್ರಷ್ಟ ರಾಜಕಾರಣ ವ್ಯವಸ್ಥೆಯನ್ನು ಬೆಳೆಸಲು ನಾವೇ ಕಾರಣವಾದಂತಾಗುತ್ತದೆ. ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಲು ಪ್ರಜಾಪ್ರಭುತ್ವ ವ್ಯವಸ್ಥೆ ಮುಕ್ತ ಅವಕಾಶ ಕಲ್ಪಿಸಿದೆ’ ಎಂದರು.

‘ಸರ್ಕಾರಗಳು ಸರಿ ಹೋಗಬೇಕಾದರೆ ಮೊದಲು ಜನರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಈ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಬಡವರ ಮಕ್ಕಳು ಬಡವರಾಗಿಯೇ ಇರಬೇಕೆಂದಿಲ್ಲ. ಎಷ್ಟು ದಿನ ಬೇರೆಯವರ ಬಳಿ ಕೈ ಕಟ್ಟಿ ನಿಂತುಕೊಳ್ಳಲು ಸಾಧ್ಯ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಎಲ್ಲ ರೀತಿಯ ಹಕ್ಕು, ಅವಕಾಶಗಳಿವೆ. ಲೋಕದ ಜ್ಞಾನ ತಿಳಿದು ಅವುಗಳನ್ನು ಪಡೆಯಬೇಕು’ಎಂದರು.

‘ಯುವಕರ ಕೈಯಲ್ಲಿ ಈ ದೇಶದ ಭವಿಷ್ಯವಿದೆ. ಬದಲಾವಣೆ ಮಾಡುವ ಶಕ್ತಿ ಯುವಜನರ ಕೈಯಲ್ಲಿದೆ. ಜವಾಬ್ದಾರಿ ಅರಿತು ಕಡ್ಡಾಯವಾಗಿ ಯೋಗ್ಯ ವ್ಯಕ್ತಿಗೆ ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಬೇಕು. ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಉತ್ತಮ ವ್ಯಾಸಂಗ ಮಾಡುವ ಮೂಲಕ ಆ ಗುರಿ ಸಾಧಿಸಿ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು’ ಎಂದರು.

ಇದೇ ಸಂದರ್ಭದಲ್ಲಿ ಮತದಾನ ಜಾಗೃತಿ ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಂಗವಿಕಲರ ಬೈಕ್‌ ರ್‍ಯಾಲಿ, ಪೋಸ್ಟರ್‌ ರಚನೆ ಸ್ಪರ್ಧೆಯನ್ನು ಉದ್ಘಾಟಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್‌ವೀರ್ ಆಸಿಫ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ವಿಶೇಷ ಚೇತನ ರಾಯಭಾರಿ ಡಾ.ಎಂ.ಎಸ್.ಚಲುವರಾಜು, ಮಂಡ್ಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಂಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ಟಿ.ಜವರೇಗೌಡ ಇದ್ದರು.

ಮಂಡ್ಯ ಪ್ರಥಮ ಸ್ಥಾನಕ್ಕೇರಲಿ
‘ಮಂಡ್ಯ ಜಿಲ್ಲೆಯ ಜನರಿಗೆ ಹೆಚ್ಚು ಪ್ರಜ್ಞೆ ಇದೆ. ಶೇಕಡವಾರು ಮತದಾನದಲ್ಲಿ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮನವಿ ಮಾಡಿದರು.

ಈಗಾಗಲೇ ಮತದಾರರಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ರಾಯಭಾರಿಗಳಾಗಿ ಚಲನಚಿತ್ರ ನಟ ನೀನಾಸಂ ಸತೀಶ್ ಹಾಗೂ ವಿಕಲಚೇತನ ರಾಯಭಾರಿಯಾಗಿ ಡಾ.ಚಲುವರಾಜ್ ಅವರನ್ನು ಆಯ್ಕೆ ಮಾಡಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.82.3 ರಷ್ಟು ಮತದಾನವಾಗಿದ್ದು ಮಂಡ್ಯ ಜಿಲ್ಲೆ ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದಿತ್ತು. ಈ ಬಾರಿ ಶೇ 90ಕ್ಕಿಂತ ಹೆಚ್ಚು ಮತದಾನ ನಡೆಯುವ ಮೂಲಕ ಪ್ರಥಮ ಸ್ಥಾನ ಪಡೆಯಬೇಕು’ಎಂದರು.

‘ಸುಶಿಕ್ಷಿತರೇ ಹೆಚ್ಚಿನ ಸಂಖ್ಯೆಯಲ್ಲಿರುವ ನಗರ ಪ್ರದೇಶಗಳಲ್ಲಿ ಶೇ 70 ರಷ್ಟು ಮತದಾನವಾಗುತ್ತಿದೆ. ಇಂತಹ ಕಡೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಮತದಾನ ಪ್ರತಿಯೊಬ್ಬರ ಹಕ್ಕು, ಜನಪ್ರತಿನಿಧಿಗಳು ಹಾಗೂ ಸರ್ಕಾರವನ್ನು ಟೀಕೆ ಮಾಡುವ ಬದಲು ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಲು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT