ಪಾಂಡವಪುರ: ‘ನನ್ನ ಮಗ ದರ್ಶನ್ ಹಣ, ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದಿಲ್ಲ. ತಂದೆ ತೋರಿಸಿರುವ ಮಾರ್ಗದಲ್ಲಿ ರೈತ ಚಳವಳಿಯನ್ನು ಬಲಗೊಳಿಸಿ ಹೋರಾಟದ ರಾಜಕಾರಣ ಮಾಡಲು ಬಂದಿದ್ದಾನೆ’ ಎಂದು ರೈತ ಸಂಘದ ವರಿಷ್ಠರಾದ ಸುನೀತಾಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ರೈತ ಸಂಘದ ಕಾರ್ಯಕರ್ತೆಯರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
‘ಹಣ, ಅಧಿಕಾರವೇ ಮುಖ್ಯವಾಗಿದ್ದರೆ ದರ್ಶನ್ ಅಮೆರಿಕಲ್ಲೇ ಇರುತ್ತಿದ್ದ. ತನ್ನ ಸಾಫ್ಟ್ವೇರ್ ಕಂಪನಿ ಮಾರಾಟ ಮಾಡುವ ಅಗತ್ಯ ಇರಲಿಲ್ಲ. ರಾಜಕಾರಣದಿಂದ ಬರುವ ಸಂಪಾದನೆ ನಮಗೆ ಬೇಕಿಲ್ಲ. ಕಳೆದ ಚುನಾವಣೆಯಲ್ಲಿ ದರ್ಶನ್ ಪುಟ್ಟಣ್ಣಯ್ಯ ಮರಳಿ ವಿದೇಶಕ್ಕೆ ಹೋಗುತ್ತಾನೆ, ಕ್ಷೇತ್ರದ ಜನರಿಗೆ ಸಿಗುವುದಿಲ್ಲ ಎಂಬ ಅಪಪ್ರಚಾರ ಮಾಡಿದ್ದರಿಂದ ಸೋಲುಂಟಾಯಿತು’ ಎಂದರು.
‘ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕಳೆದ ಐದು ವರ್ಷಗಳಲ್ಲಿ ಅಭಿವೃದ್ಧಿ ಕಂಡಿಲ್ಲ. 2018ರ ಚುನಾವಣೆಯಲ್ಲಿ ಆರಿಸಿ ಬಂದವರು ಕೊಟ್ಟ ಭರವಸೆ ಈಡೇರಿಲ್ಲ. ಈ ಚುನಾವಣೆಯಲ್ಲಿ ಮಹಿಳಾ ಮತದಾರರು ಹಣದ ವ್ಯಾಮೋಹಕ್ಕೆ ಬಲಿಯಾಗದೆ ಸರ್ವೋದಯ ಕರ್ನಾಟಕದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗೆಲ್ಲಿಸಬೇಕು’ ಎಂದರು.
ರೈತ ಸಂಘದ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ‘ನಾನು ಶ್ರಮಪಟ್ಟು ಕಟ್ಟಿದ ಕೋಟ್ಯಂತರ ಮೌಲ್ಯದ ಕಂಪನಿ ಮಾರಾಟ ಮಾಡಿ ಜನರ ಪ್ರೀತಿ ವಿಶ್ವಾಸಕ್ಕಾಗಿ ಬಂದಿದ್ದೇನೆ. ರೈತನ ಜೀವನಕ್ಕೆ ಆಧಾರವೇ ಇಲ್ಲದಂತಾಗಿದೆ. ರೈತ ನಾಯಕರು ಕಣ್ಮರೆಯಾಗುತ್ತಿದ್ದಾರೆ. ರೈತರು ಸಾಲದ ಸುಳಿಯಲ್ಲಿ ಸಿಲುಕಿ ಸಾಲದಲ್ಲೇ ಸಾಯುವ ಸ್ಥಿತಿ ನಿರ್ಮಾಣವಾಗಿದೆ. ಹಣದ ಆಮಿಷ ಒಡ್ಡಿ ಇತರ ಪಕ್ಷದ ಮುಖಂಡರನ್ನು ಸೆಳೆಯುವುದೇ ರಾಜಕಾರಣವಾಗಿ ಬಿಟ್ಟಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ನನಗೆ ರಾಜಕೀಯ ಅಧಿಕಾರದ ಅವಕಾಶ ನೀಡಿದರೆ ರಾಜ್ಯವೇ ನಮ್ಮ ಕ್ಷೇತ್ರದ ಕಡೆ ತಿರುಗಿ ನೋಡುವಂತೆ ಮಾಡುತ್ತೇನೆ’ ಎಂದು ಹೇಳಿದರು.
ರೈತ ನಾಯಕಿ ನಂದಿನಿ ಜಯರಾಮ್, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲ್ಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಕಾರ್ಯದರ್ಶಿ ವಿಜಯಕುಮಾರ್, ಮುಖಂಡರಾದ ಅಮೃತಿ ರಾಜಶೇಖರ್, ಸ್ಮಿತಾ ಪುಟ್ಟಣ್ಣಯ್ಯ, ಕೋಕಿಲಾ ಜ್ಞಾನೇಶ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.