ಪಾಂಡವಪುರ: ಪಟ್ಟಣದ ಉಪ ವಿಭಾಗೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನೀಡಲಾಗುತ್ತಿದ್ದ 2ನೇ ಹಂತದ ಕೋವಿಶೀಲ್ಡ್ ಲಸಿಕೆಯನ್ನು ಮೇ 10ರಿಂದ ಪಟ್ಟಣದ ಸರ್ಕಾರಿ ಪಿಯು ಕಾಲೇಜಿಗೆ ವರ್ಗಾಯಿಸಲಾಗಿದ್ದು, ನೋಂದಣಿ ಮಾಡಿಸಿಕೊಂಡ ನಂತರ ಲಸಿಕೆ ಹಾಕಲು ತಾಲ್ಲೂಕು ಆಡಳಿತ ನಿರ್ಧರಿಸಿದೆ.
ಇಬ್ಬರು ಸಾವು: ತಿಮ್ಮನಕೊಪ್ಪಲು ಗ್ರಾಮದ ಗ್ರಾ.ಪಂ.ಸದಸ್ಯ ಹಾಗೂ ಚಿಕ್ಕಾಡೆ ಗ್ರಾಮದ ವ್ಯಕ್ತಿ ಕೋವಿಡ್ನಿಂದ ನಿಧನರಾಗಿದ್ದಾರೆ.
ಬೈಕ್ ವಶ: ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದ ಬೈಕ್ ಸವಾರರಿಗೆ ಪೊಲೀಸರು ಲಾಠಿ ಬೀಸಿದ್ದಾರೆ. 30ಕ್ಕೂ ಹೆಚ್ಚು ಬೈಕ್ಗಳನ್ನು ವಶಕ್ಕೆ ಪಡೆದರು. ಸಿಪಿಐ ಕೆ.ಪ್ರಭಾಕರ್ ನೇತೃತ್ವದಲ್ಲಿ ಪಟ್ಟಣದ ಮುಖ್ಯ ರಸ್ತೆ, ಸರ್ಕಲ್ ಹಾಗೂ ಬೀದಿಗಳಲ್ಲಿ ಸಂಚರಿಸಿದ ಪೊಲೀಸರು ಲಾಕ್ಡೌನ್ ನಿಯಮ ಪಾಲಿಸದ ಜನರ ಮೇಲೆ ಕ್ರಮವಹಿಸಿದರು.
ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದವು.
ಅಧಿಕಾರಿಗಳ ಸಭೆ: ಶಾಸಕ ಸಿ.ಎಸ್.ಪುಟ್ಟರಾಜು ಸೋಮವಾರ ಅಧಿಕಾರಿ ಗಳ ಸಭೆ ನಡೆಸಿದರು. ಕೊರೊನಾ ತಡೆಗಟ್ಟುವಿಕೆಗೆ ಅಧಿಕಾರಿಗಳು ಅನುಸರಿ ಸಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು. ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರೊನಾ ಲಸಿಕೆ ಕೇಂದ್ರವಾಗಿ ಮಾರ್ಪಟ್ಟಿರುವ ಸರ್ಕಾರಿ ಪಿಯು ಕಾಲೇಜಿಗೆ ಭೇಟಿ ನೀಡಿ ಲಸಿಕೆ ವ್ಯವಸ್ಥೆಯ ಬಗ್ಗೆಯೂ ಪರಿಶೀಲನೆ ನಡೆಸಿದರು.
ಬಿಜೆಪಿ ಮುಖಂಡರ ಭೇಟಿ: ಕಿಯೋನಿಕ್ಸ್ ನಿರ್ದೇಶಕ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ತಾಲ್ಲೂಕಿನ ಕಿತ್ತೂರು ರಾಣಿ ಚನ್ನಮ್ಮ ಹಾಸ್ಟಲ್ನ ಕೋವಿಡ್ ಕೇರ್ ಸೆಂಟರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಜುನಾಥ್ ಮಾತನಾಡಿ, ಸರ್ಕಾರ ನೀಡುವ ಸೌಲಭ್ಯಗಳಲ್ಲಿ ವ್ಯತ್ಯಾಸ ಉಂಟಾದರೆ ಅದನ್ನು ಸರ್ಕಾರದ ಗಮನಕ್ಕೆ ತಂದು ಸರಿಪಡಿಸಲಾಗುವುದು. ಸೋಂಕಿತರಿಗೆ ಯಾವುದೇ ರೀತಿಯ ಕೊರತೆ ಕಾಣದಂತೆ ನೋಡಿಕೊಳ್ಳಬೇಕು ಎಂದು ಕೇರ್ ಸೆಂಟರ್ ಅಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.