ಮಳವಳ್ಳಿ: ತಾಲ್ಲೂಕಿನ ಮಾದಹಳ್ಳಿ ಗ್ರಾಮದಲ್ಲಿ ಏ.2ರಂದು ಕೊಂಡ ಹಾಯುವಾಗ ಬೆಂಕಿಯಲ್ಲಿ ಬಿದ್ದು ಗಾಯಗೊಂಡಿದ್ದ, ಅರ್ಚಕ ನಾಗೇಂದ್ರ(44) ಭಾನುವಾರ ಮೃತಪಟ್ಟರು.
ಕಳೆದ ಹಲವಾರು ವರ್ಷಗಳಿಂದ ಗ್ರಾಮದ ಬಸವೇಶ್ವರಸ್ವಾಮಿ ಕೊಂಡ ಹಾಯುತ್ತಿದ್ದ ಅವರು, ಏ.2ರಂದು ನಡೆದಿದ್ದ ಕೊಂಡೊತ್ಸವ ವೇಳೆ ಕೊಂಡದ ಮಧ್ಯಭಾಗದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎದೆ, ತೊಡೆ, ಕೈ, ಕಾಲು ಸೇರಿದಂತೆ ದೇಹದ ಶೇ 60 ಭಾಗದಷ್ಟು ಸುಟ್ಟಗಾಯಗೊಂಡಿದ್ದ ಅವರಿಗೆ, ಕಿಡ್ನಿ ಸಮಸ್ಯೆಯೂ ಕಾಡಿತ್ತು. ಭಾನುವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.