ಮಳವಳ್ಳಿ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್ ತಯಾರಿ ಆರಂಭಿಸಿದ್ದು, ಬಹುಸಂಖ್ಯಾತ ಒಕ್ಕಲಿಗ ಸಮುದಾಯದ ಮುಖಂಡರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಲು ಮುಂದಾಗಿದ್ದಾರೆ.
ತಾಲ್ಲೂಕಿನ ಮೂಗನಕೊಪ್ಪಲು ಗ್ರಾಮದ ಬನಸಿರಿ ಸಮುದಾಯದ ಭವನದ ಆವರಣದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಕಾಂಗ್ರೆಸ್ನ ಬಹುತೇಕ ಒಕ್ಕಲಿಗ ಮುಖಂಡರು ಭಾಗವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ ಕೆ.ಎಂ.ಪುಟ್ಟು ಮಾತನಾಡಿ, ಕಳೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಅತಿಹೆಚ್ಚು ಮಂದಿ ಆಯ್ಕೆಯಾಗಿದ್ದು, ಪಕ್ಷಕ್ಕೆ ದ್ರೋಹ ಮಾಡಿರುವವರು ಎಂದಿಗೂ ಕಾಂಗ್ರೆಸ್ ಪಕ್ಷದವರಾಗುವುದಿಲ್ಲ. ಅವರಿಗೆ ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ. ನಮ್ಮ ನಾಯಕರಾದ ಪಿ.ಎಂ.ನರೇಂದ್ರಸ್ವಾಮಿ ಅವರು ತಂದಿರುವ ₹ 2,300 ಕೋಟಿ ಅನುದಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿವೆ ಎಂದರು.
ಜಿ.ಪಂ.ಸುಷ್ಮಾ ರಾಜು ಮಾತನಾಡಿ, ಈಗಿನಿಂದಲೇ ಪಕ್ಷವನ್ನು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಬಲ ಪಡಿಸಬೇಕು. ಒಕ್ಕಲಿಗ ಸಮುದಾಯ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು, ಅವರ ಕೈಬಲಪಡಿಸಬೇಕು. ನಿಷ್ಠಾವಂತ ಕಾರ್ಯಕರ್ತರಿಗೆ ಈ ಬಾರಿ ಟಿಕೆಟ್ ದೊರೆಯಲಿದೆ ಎಂದರು.
ತಾ.ಪಂ.ಸದಸ್ಯ ವಿ.ಪಿ.ನಾಗೇಶ್ ಮಾತನಾಡಿ, ಅಧಿಕಾರ ಅನುಭವಿಸಿ ಹೊರ ಹೋಗಿರುವ ಕೆಲವರು ಪಿ.ಎಂ.ನರೇಂದ್ರಸ್ವಾಮಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ದಕ್ಷ ಮತ್ತು ಪ್ರಾಮಾಣಿಕರಾಗಿರುವ ಪಿ.ಎಂ.ನರೇಂದ್ರಸ್ವಾಮಿ ಅವರ ಕೈ ಬಲಪಡಿಸಬೇಕಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ.ಸುಂದರ್ ರಾಜ್ ಮಾತನಾಡಿ, ಚುನಾವಣೆಯಲ್ಲಿ ಎಲ್ಲರಿಗೂ ಟಿಕೆಟ್ ನೀಡಲು ಸಾಧ್ಯವಿಲ್ಲ. ನಾಯಕರ ಅವರ ತೀರ್ಮಾನಕ್ಕೆ ಬದ್ಧರಾಗಬೇಕು ಎಂದರು. ಸಭೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಹಲವರು ಅಭಿಪ್ರಾಯ ತಿಳಿಸಿದರು.
ತಾ.ಪಂ.ಅಧ್ಯಕ್ಷ ಪುಟ್ಟಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಕುಳ್ಳಚೆನ್ನಂಕಯ್ಯ, ನಿರ್ದೇಶಕರಾದ ಬಸವರಾಜು, ಬಸವೇಶ್, ಲಿಂಗರಾಜು, ಹನುಮಂತು, ಚೌಡಯ್ಯ, ಸವಿತಾ, ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಕೆ.ಚೌಡಯ್ಯ, ಶಕುಂತಲಾ ಮಲ್ಲಿಕ್, ಶಿವ ಮಾದೇಗೌಡ, ಕೆ.ವಿ.ಪ್ರಕಾಶ್ ಇದ್ದರು.