ಮಂಡ್ಯ:ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ದಕ್ಷಿಣ ಕರ್ನಾಟಕ ಕಬ್ಬು ಸಾಗಾಣಿಕೆ ಲಾರಿ ಮಾಲೀಕರ ಸಂಘಗಳ ಒಕ್ಕೂಟದಿಂದ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಅವರಿಗೆ ಶುಕ್ರವಾರ ಮನವಿ ನೀಡಲಾಯಿತು.
ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಲಾರಿ ಮಾಲೀಕರು ತಮ್ಮ ಅಹವಾಲು ಹೇಳಿಕೊಂಡರು. ಪ್ರಸಕ್ತ ಸಾಲಿನ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದರು.ಲಾರಿ ಮತ್ತು ಟ್ರಾಕ್ಟರ್ ಮಾಲೀಕರಿಗೆ ಆಗುತ್ತಿರುವ ಶೋಷಣೆ ಕುರಿತಂತೆ ಈಗಾಗಲೇ ಆಯುಕ್ತರಿಗೆ ಮನವಿ ನೀಡಲಾಗಿದ್ದು, ಇದಕ್ಕೆ ಸ್ಪಂದಿಸಿದ ಆಯುಕ್ತರು ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಆದರೂ ದರ ಪರಿಷ್ಕರಣೆ ಆಗಿಲ್ಲ ಎಂದು ದೂರಿದರು.
ದಕ್ಷಿಣ ಕರ್ನಾಟಕದ ಕಾರ್ಖಾನೆಗಳು ಜೂನ್ನಲ್ಲೇ ಪ್ರಾರಂಭವಾಗುತ್ತವೆ. ಪ್ರತಿ ವರ್ಷ ಕಾರ್ಖಾನೆ ಪ್ರಾರಂಭಕ್ಕೂ ಮುನ್ನವೇ ದರ ನಿಗದಿ ಮಾಡಬೇಕಾಗಿದೆ. ಆದ್ದರಿಂದ ಈ ಸಾಲಿನ ಸಾಗಾಣಿಕಾ ವೆಚ್ಚ ಪರಿಷ್ಕರಣೆ ಮಾಡಬೇಕಾಗಿದೆ.ಆಯುಕ್ತರು ದರ ನಿಗದಿ ಪಟ್ಟಿಯನ್ನು ಎಲ್ಲ ಸಕ್ಕರೆ ಕಾರ್ಖಾನೆಗಳಿಗೂ ಕಳುಹಿಸಿದ್ದಾರೆ. ಆದರೆ, ಕಾರ್ಖಾನೆಗಳ ಆಡಳಿತ ಮಂಡಳಿ ಇದುವರೆಗೂ ದರ ನಿಗದಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಯುಕ್ತರು ನೀಡಿರುವ ದರವನ್ನು ಎಲ್ಲ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ನಿಯಮಾನುಸಾರ ಜಾರಿಗೊಳಿಸಿ ಲಾರಿ ಮಾಲೀಕರ ಜೀವನ ನಿರ್ವಹಣೆಗೆ ಅನುಕೂಲ ಮಾಡಿಕೊಡಬೇಕು. ಜೊತೆಗೆ ಜಿಲ್ಲಾಧಿಕಾರಿ ಈ ಆದೇಶವನ್ನು ಜಾರಿಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತೆ ಇಂಥ ಸಮಸ್ಯೆ ಆಗದಂತೆ ಕ್ರಮ ವಹಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಕೆ.ಎಸ್.ವೇಣುಗೋಪಾಲ್, ಬಲರಾಮು, ಸತ್ಯಾನಂದ, ಸಿದ್ದಪ್ಪ, ಮಹೇಶ, ಜಗದೀಶ, ಕೃಷ್ಣಮೂರ್ತಿ, ಲಿಂಗರಾಜು, ವೆಂಕಟೇಶ್, ವಿಶ್ವನಾಥ್, ಕೃಷ್ಣೇಗೌಡ ಇದ್ದರು.