ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ.ಅಧ್ಯಕ್ಷ ಗಾದಿಗೇರಿದ 75ರ ಅಜ್ಜಿ

ಕವಯತ್ರಿ, ಗಾಯಕಿಯಾಗಿರುವ ಭೀಮನಕೆರೆ ಜಯಲಕ್ಮಮ್ಮ
Last Updated 15 ಫೆಬ್ರುವರಿ 2021, 6:32 IST
ಅಕ್ಷರ ಗಾತ್ರ

ಭಾರತೀನಗರ: ಸಮೀಪದ ಕೊಕ್ಕರೆ ಬೆಳ್ಳೂರು ಗ್ರಾ.ಪಂ ಅಧ್ಯಕ್ಷರಾಗಿ ಪಂಚಾಯಿತಿ ವ್ಯಾಪ್ತಿಯ ಭೀಮನಕೆರೆ ಗ್ರಾಮದ ‘75’ ವರ್ಷದ ಮಹಿಳೆ, ಜಯಲಕ್ಮಮ್ಮ ಆಯ್ಕೆಯಾಗಿದ್ದಾರೆ.

ಜಯಲಕ್ಷ್ಮಮ್ಮ ಅವರಿಗೆ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯೇ ಮೊದಲ ಸ್ಪರ್ಧಾ ಕಣ. ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದ ಭೀಮನಕೆರೆ ಗ್ರಾಮದ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಜಯಲಕ್ಮಮ್ಮ ಅವರು 3 ಮತಗಳ ಅಂತರದ ಗೆಲುವಿನ
ಮಾಲೆಗೆ ಕೊರಳೊಡ್ಡಿದರು. ಜತೆಗೆ ಪಂಚಾಯತಿ ಅಧ್ಯಕ್ಷ ಸ್ಥಾನವೂ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದರಿಂದ ಜಯ ಲಕ್ಷ್ಮಮ್ಮ ಅಧ್ಯಕ್ಷ ಗಾದಿ ಅಲಂಕರಿಸಿದರು.

ಕಾಂಗ್ರೆಸ್‌– ಬಿಜೆಪಿ ಬೆಂಬಲಿತ ಸದಸ್ಯರ ಮೈತ್ರಿಯ ಫಲದಿಂದಾಗಿ 17 ಮಂದಿ ಸದಸ್ಯ ಬಲದ ಪಂಚಾಯಿತಿಯಲ್ಲಿ
11 ಸದಸ್ಯರ ಬೆಂಬಲ ಪಡೆದು ಜಯಲಕ್ಷ್ಮಮ್ಮ ಗೆಲುವು ಸಾಧಿಸಿದರು.

7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿರುವ ಅವರು ಕವಯತ್ರಿ, ಗಾಯಕಿಯೂ ಆಗಿದ್ದಾರೆ. ನೂರಾರು ಕವನಗಳನ್ನು ರಚಿಸಿ, ಸ್ವತಃ ರಾಗ ಸಂಯೋಜಿಸಿ ಹಾಡುವಂಥ ಪ್ರತಿಭೆ ಅವರಲ್ಲಿದೆ. ಜಾನಪದ ಗೀತೆ, ಭಾವಗೀತೆ ಹಾಗೂ ದೇವರನಾಮಗಳನ್ನೂ ಸುಶ್ರಾವ್ಯವಾಗಿ ಹಾಡುವುದನ್ನೂ ಕರಗತ ಮಾಡಿಕೊಂಡಿದ್ದಾರೆ. ಕೊರೊನಾ ಕುರಿತ ಜಾಗೃತಿ ಗೀತೆ ರಚಿಸಿ ಹಾಡಿ ಅರಿವು ಮೂಡಿಸಿದ್ದಾರೆ.

ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದು, 7 ಮೊಮ್ಮಕ್ಕಳ ಅಚ್ಚುಮೆಚ್ಚಿನ ಅಜ್ಜಿಯಾಗಿರುವ ಜಯಲಕ್ಷ್ಮಮ್ಮ ಕುಟುಂಬದ ಎಲ್ಲರಿಗೂ ಉತ್ತಮ ಶಿಕ್ಷಣ ನೀಡಿದ್ದಾರೆ. ಪುತ್ರ ಲಿಂಗರಾಜು ಗ್ರಾ.ಪಂ ಕಾರ್ಯದರ್ಶಿ ಯಾಗಿ, ಪುತ್ರಿ ಬಿ.ಎನ್.ತನುಜಾ ಅಂಗನವಾಡಿ ಕಾರ್ಯಕರ್ತೆಯಾಗಿ, ಸೊಸೆಯಂದಿರಾದ ಸರೋಜಮ್ಮ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ, ರಮ್ಯಾ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್‌ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ್ಬ ಪುತ್ರ ಕೆಂಪರಾಜು ವ್ಯವಸಾಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

‘ಗ್ರಾಮದ ಜನರ ಬೆಂಬಲ
ಹಾಗೂ ಸದಸ್ಯರ ಸಹಕಾರದಿಂದ ಅಧ್ಯಕ್ಷ ಗಾದಿಗೇರಿದ್ದೇನೆ. ಯಾವುದೇ ಕೆಲಸ ಮಾಡಲು ವಯಸ್ಸು
ಮುಖ್ಯವಲ್ಲ. ಉತ್ಸಾಹ, ಚೈತನ್ಯ ಮುಖ್ಯ. ಜನರ ಸೇವೆ ಮಾಡಲು ಒಳ್ಳೆಯ ಅವಕಾಶ ಸಿಕ್ಕಿದ್ದು, ಸದುಪಯೋಗ ಪಡಿಸಿಕೊಳ್ಳುತ್ತೇನೆ’ ಎಂದು ಜಯಲಕ್ಷ್ಮಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT