ಶ್ರೀರಂಗಪಟ್ಟಣ: ಮೈಸೂರು ದಸರಾಕ್ಕೂ ಪುರಾತನವಾದ ಶ್ರೀರಂಗಪಟ್ಟಣ ದಸರಾ ಅ.9ರಿಂದ ಮೂರು ದಿನಗಳ ಕಾಲ ನಡೆಯಲಿದೆ. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಅ.9ರಂದು ಮಧ್ಯಾಹ್ನ 3 ಗಂಟೆಗೆ ತಾಲ್ಲೂಕಿನ ಕಿರಂಗೂರು ಬನ್ನಿ ಮಂಟಪದ ಬಳಿ ದಸರಾ ಉತ್ಸವಕ್ಕೆ ಚಾಲನೆ ಸಿಗಲಿದೆ. ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸಿ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ. ಬನ್ನಿ ಮಂಟಪದಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದವರೆಗೆ ಜಂಬೂ ಸವಾರಿ ನಡೆಯಲಿದ್ದು ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.
ಸಂಜೆ 6 ಗಂಟೆಗೆ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸಲಿದ್ದಾರೆ. ಮೂರು ದಿನ ಯುವ ದಸರಾ, ಮಕ್ಕಳ ದಸರಾ, ರೈತ ದಸರಾ, ಮಹಿಳಾ ದಸರಾ, ಹಾಸ್ಯ ದಸರಾ, ಸಾಂಸ್ಕೃತಿಕ ದಸರಾ, ಉದ್ಯೋಗ ದಸರಾ ನಡೆಯಲಿವೆ.
ಜೊತೆಗೆ ಜಲ ಕ್ರೀಡೆ, ಕಬಡ್ಡಿ, ಕುಸ್ತಿ, ಯೋಗ ಪ್ರದರ್ಶನ ನಡೆಯಲಿವೆ. ಅ.11ರಂದು ಚಲನಚಿತ್ರ ತಾರೆಯರಿಂದ ಸ್ಟಾರ್ ನೈಟ್ ಏರ್ಪಡಿಸಲಾಗಿದೆ. ಶ್ರೀರಂಗಪಟ್ಟಣ ದಸರಾಕ್ಕೆ ಸರ್ಕಾರದಿಂದ ₹ 50 ಲಕ್ಷ ಬಿಡುಗಡೆಯಾಗಿದೆ.