ಮಂಡ್ಯ: ಮಳೆ ಕೊರತೆಯಿಂದ ಉಂಟಾಗಿರುವ ಬರ, ನಾಲಾ ಆಧುನೀಕರಣ ಕಾಮಗಾರಿಯಿಂದ ತಲೆ ಎತ್ತಿರುವ ಕೃತಕ ಬರ ಜಿಲ್ಲೆಯ ರೈತರನ್ನು ಕಾಡುತ್ತಿದೆ. ಬಿಸಿಲಿನ ತೀವ್ರತೆಯಿಂದಾಗಿ ಬೆಳೆದು ನಿಂತಿರುವ ಕಬ್ಬು ಬೆಂದು ಹೋಗುತ್ತಿದ್ದು ರೈತರು ಆರ್ಥಿಕವಾಗಿ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ.
ಜಿಲ್ಲೆಯಾದ್ಯಂತ ಕೆಆರ್ಎಸ್ ಜಲಾಶಯದ ನೀರನ್ನೇ ನಂಬಿ 35 ಸಾವಿರ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ರೈತರು ಕಬ್ಬು ನಾಟಿ ಮಾಡಿದ್ದರು. ಆದರೆ ಬರದಿಂದಾಗಿ ಬಹುತೇಕ ಕಬ್ಬು ಒಣಗಿ ತರಗೆಲೆಯಂತಾಗಿದ್ದು ಬೆಂಕಿ ಅನಾಹುತದ ಅಪಾಯ ಎದುರಿಸುತ್ತಿದೆ. ಅಂತರ್ಜಲ ಕೊರತೆಯಿಂದಾಗಿ ಕೊಳವೆಬಾವಿಗಳು ಕೂಡ ಕೈಕೊಟ್ಟಿದ್ದು ಪಂಪ್ಸೆಟ್ ಆಶ್ರಿತ ರೈತರೂ ಕಬ್ಬು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ, ಮಳವಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಬರ ತೀವ್ರವಾಗಿ ಕಾಡುತ್ತಿದ್ದು ಶೇ 80ರಷ್ಟು ಪ್ರಮಾಣದ ಕಬ್ಬು ಒಣಗುತ್ತಿದೆ. ಜನವರಿಯಿಂದ ನಾಲೆಗಳಲ್ಲಿ ಒಂದು ಕಟ್ಟು ನೀರು ಹರಿಯದ ಕಾರಣ ಕಬ್ಬು ರೈತರ ಕಣ್ಣಮುಂದೆಯೇ ನಾಶ ಹೊಂದುತ್ತಿದೆ. ಬಿಸಿಲಿನ ತೀವ್ರತೆಯಿಂದಾಗಿ ಬೆಂಕಿ ಅನಾಹುತ ಸಾಮಾನ್ಯವಾಗಿದ್ದು ಅಪಾರ ಪ್ರಮಾಣದ ಕಬ್ಬು ಈಗಾಗಲೇ ಸುಟ್ಟು ಹೋಗಿದೆ.
‘ನಾಲೆಯಲ್ಲಿ ನೀರು ಹರಿಯದಿದ್ದರೂ ಕೊಳವೆಬಾವಿ ಸಹಾಯದಿಂದ ಕಬ್ಬು ಉಳಿಸಿಕೊಳ್ಳುವ ನಂಬಿಕೆ ಇತ್ತು. ಆದರೆ ರೈತರ ನಂಬಿಕೆ ಈ ಬಾರಿ ಸುಳ್ಳಾಗಿದೆ. ಕೊಳವೆಬಾವಿಯಲ್ಲೂ ನೀರು ನಿಂತು ಹೋಗಿದ್ದು ಕಬ್ಬು ಉಳಿಸಿಕೊಳ್ಳುವ ಕಡೆಯ ದಾರಿಯೂ ಮುಚ್ಚಿ ಹೋಗಿದೆ. ರೈತರು ಅಸಹಾಯಕ ಸ್ಥಿತಿಯಲ್ಲಿದ್ದಾರೆ’ ಎಂದು ಹೊಳಲು ಗ್ರಾಮದ ರೈತ ನಾಗರಾಜು ಬೇಸರ ವ್ಯಕ್ತಪಡಿಸಿದರು.
ಕಳೆದ ವರ್ಷ ಮಳೆ ಕೊರತೆಯಾದರೂ ಜೂನ್ ತಿಂಗಳ ವೇಳೆಯಲ್ಲಿ ಕೆಆರ್ಎಸ್ ಜಲಾಶಯದಲ್ಲಿ 115 ಅಡಿ ನೀರಿನ ಸಂಗ್ರಹವಿತ್ತು. ನೀರಿನ ಕೊರತೆಯಾಗದು ಎಂಬ ನಂಬಿಕೆಯಿಂದ ರೈತರು ಕಬ್ಬು ನಾಟಿ ಮಾಡಿದರು. ನಂತರ ಮಳೆಯ ಬಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಏಳೂ ತಾಲ್ಲೂಕುಗಳಲ್ಲೂ ಬರ ಘೋಷಣೆ ಮಾಡಲಾಯಿತು.
ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಬಿತ್ತನೆ ಬೇಡ ಎಂದು ಮೊದಲೇ ಎಚ್ಚರಿಕೆ ನೀಡಿದ್ದರು. ಕೆಆರ್ಎಸ್ ನೀರು ದೊರೆಯುತ್ತದೆ ಎಂಬ ನಂಬಿಕೆಯಿಂದಾಗಿ ರೈತರು ಸಚಿವರ ಮಾತು ಮೀರಿ ಬಿತ್ತನೆ ಮಾಡಿದ್ದರು. ಎಂಥದ್ದೇ ಪರಿಸ್ಥಿತಿ ಬಂದರೂ ನಾಲೆ ನೀರು ಸಿಗುತ್ತದೆ ಎಂದು ರೈತರು ಬಲವಾಗಿ ನಂಬಿದ್ದರು. ಆದರೆ ರೈತರ ನಂಬಿಕೆ ಸುಳ್ಳಾಗಿದ್ದು ಈಗ ಕಬ್ಬು ಕರಕಲಾಗುವುದನ್ನು ನೋಡುವ ಪರಿಸ್ಥಿತಿ ಬಂದಿದೆ.
ಕೃತರ ಬರ: ಸರ್ಕಾರ ಏಕಾಏಕಿ ನಾಲಾ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಂಡ ಕಾರಣ ನಾಲೆಯಲ್ಲಿ ನೀರು ಹರಿಯದಾಗಿದೆ. ಹಿಂದೆಲ್ಲಾ 70 ಅಡಿ ನೀರಿದ್ದರೂ ಬೆಳೆಗೆ ನೀರು ಕೊಟ್ಟ ಹಲವು ಉದಾಹರಣೆಗಳಿವೆ. ಆದರೆ ಬರ ಪರಿಸ್ಥಿತಿಯಲ್ಲಿ ನಾಲಾ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಂಡ ಕಾರಣ ಬರದೊಳಗೆ ಇನ್ನೊಂದು ಕೃತಕ ಬರ ಸೃಷ್ಟಿಯಾದಂತಗಿದೆ.
ಸಂಪೂರ್ಣವಾಗಿ ನೀರು ತಪ್ಪಿಸಿ ನಾಲಾ ಆಧುನೀಕರಣ ಕಾಮಗಾರಿ ನಡೆಸುತ್ತಿರುವುದಕ್ಕೆ ರೈತರಲ್ಲಿ ಆಕ್ರೋಶವಿದೆ. ತಂತ್ರಜ್ಞಾನ ಯುಗದಲ್ಲಿ ‘ಆನ್ ಮತ್ತು ಆಫ್’ ಮಾದರಿಯಲ್ಲಿ ಕಾಮಗಾರಿ ನಡೆಸಬೇಕಾಗಿತ್ತು. ರೈತರನ್ನು ಕತ್ತಲೆಯಲ್ಲಿಟ್ಟು ಮಾಡುತ್ತಿರುವ ಕಾಮಗಾರಿ ಯಾವ ಪುರುಷಾರ್ಥಕ್ಕಾಗಿ ಎಂದು ರೈತರು ಪ್ರಶ್ನಿಸುತ್ತಾರೆ.
‘ರೈತರ ಅಭಿಪ್ರಾಯ ಪಡೆಯದೇ ಏಕಾಏಕಿ ನಾಲಾ ಕಾಮಗಾರಿ ಆರಂಭಿಸಿದ್ದು ತಪ್ಪು. ಈಗ ರೈತರ ಬಾಳು ಸಂಕಷ್ಟದಲ್ಲಿದ್ದು ಅವರಿಗೆ ಪರಿಹಾರ ನೀಡಬೇಕು, ಇಲ್ಲದಿದ್ದರೆ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲಿವೆ’ ಎಂದು ರೈತ ಮಖಂಡ ಬಸವರಾಜು ಆತಂಕ ವ್ಯಕ್ತಪಡಿಸಿದರು.
ಸರ್ಕಾರಿ ಸ್ವಾಮ್ಯದ ಮೈಷುಗರ್ ಸೇರಿದಂತೆ ಇತರ ಐದು ಖಾಸಗಿ ಸಕ್ಕರೆ ಕಾರ್ಖಾನೆಗಳು ಜೂನ್ ತಿಂಗಳಲ್ಲಿ ಕಬ್ಬು ಅರೆಯುವ ಪ್ರಕ್ರಿಯೆ ಆರಂಭಿಸಬೇಕು. ಆದರೆ ಜಿಲ್ಲಾ ವ್ಯಾಪ್ತಿಯಲ್ಲಿ ಕಬ್ಬಿನ ಕೊರತೆ ಎದುರಾಗಿದ್ದು ಸಕ್ಕರೆ ಕಾರ್ಖಾನೆಗಳು ಆರಂಭವಾಗುವ ಯಾವುದೇ ಲಕ್ಷಣ ಗೋಚರಿಸುತ್ತಿಲ್ಲ. ಮೈಷುಗರ್ ವ್ಯಾಪ್ತಿಯ ಬಹುತೇಕ ಕಬ್ಬು ನಾಶವಾಗಿದ್ದು ಅರೆಬರೆ ಬೆಳೆದ ಕಬ್ಬನ್ನು ರೈತರು ಆಲೆಮನೆಗೆ ಮಾರಾಟ ಮಾಡಿದ್ದಾರೆ ಕೆಲವರು ಗೋಲಿ ಬೆಲ್ಲಕ್ಕೆ ಕೊಟ್ಟಿದ್ದಾರೆ. ಹೀಗಾಗಿ ಮೈಷುಗರ್ ಆರಂಭಗೊಳಿಸುವ ಯಾವುದೇ ಸಿದ್ಧತೆ ಚಟುವಟಿಕೆ ನಡೆಯುತ್ತಿಲ್ಲ. ‘ಪ್ರತಿ ವರ್ಷ 30 ಲಕ್ಷ ಟನ್ ಕಬ್ಬು ಕಾರ್ಖಾನೆಗಳಿಗೆ ದೊರೆಯುತ್ತಿತ್ತು ಆದರೆ ಈ ಬಾರಿ 2 ಲಕ್ಷ ಟನ್ ಕಬ್ಬು ದೊರೆಯುವುದು ಅನುಮಾನ. ಹೀಗಾಗಿ ಈ ವರ್ಷ ಸಕ್ಕರೆ ಕಾರ್ಖಾನೆಗಳು ಆರಂಭಗೊಳ್ಳುವುದೇ ಅನುಮಾನ’ ಎಂದು ರೈತ ಮುಖಂಡರೊಬ್ಬರು ತಿಳಿಸಿದರು.
ಮಳೆಕೊರತೆಯಿಂದ ಉಂಟಾಗಿರುವ ಕಬ್ಬು ಬೆಳೆ ಹಾನಿ ಸಮೀಕ್ಷೆ ಇನ್ನೂ ಆಗಿಲ್ಲ. ಸರ್ಕಾರ ಸೂಚನೆ ನೀಡಿದರೆ ಸಮೀಕ್ಷೆ ನಡೆಸಿ ವರದಿ ನೀಡಲಾಗುವುದು–ವಿ.ಎಸ್.ಅಶೋಕ್ ಕೃಷಿ ಜಂಟಿ ನಿರ್ದೇಶಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.