ಪಾಂಡವಪುರ: ಇಲ್ಲಿನ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್ಎಸ್ಕೆ) ವ್ಯಾಪ್ತಿಯ ಕಬ್ಬನ್ನು ಹೊರ ಜಿಲ್ಲೆ ಮತ್ತು ರಾಜ್ಯಗಳಿಗೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಕಬ್ಬಿನ ಲಾರಿಯನ್ನು ತಡೆದು ರೈತರು ಹಾಗೂ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.
ಪಿಎಸ್ಎಸ್ಕೆ ಬಳಿಯ ಮೈಸೂರು ಮುಖ್ಯ ರಸ್ತೆಯಲ್ಲಿ ಕಬ್ಬು ತುಂಬಿದ ಲಾರಿಯನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯ ಸರ್ಕಾರವು ಪಿಎಸ್ಎಸ್ಕೆಯನ್ನು ನಿರಾಣಿ ಶುಗರ್ಸ್ಗೆ ಗುತ್ತಿಗೆ ನೀಡಿದ್ದು, ಆ. 11ರಿಂದ ಕಾರ್ಖಾನೆಯಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭಗೊಳ್ಳಲಿದೆ. ಇದಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಆದರೆ, ಈ ಭಾಗದ ಕಬ್ಬನ್ನು ಹೊರ ಜಿಲ್ಲೆ ಮತ್ತು ರಾಜ್ಯದ ಸಕ್ಕರೆ ಕಾರ್ಖಾನೆಯ ಮಾಲೀಕರು ಖರೀದಿಸಲು ಮುಂದಾಗಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹೊರಗಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡದಂತೆ ಹಾಗೂ ಸಾಗಣೆಯಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಜಿಲ್ಲಾಡಳಿತವು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.
‘ಕಬ್ಬು ಸಾಗಣೆಯನ್ನು ನಿಲ್ಲಿಸಲು ಕ್ರಮ ವಹಿಸದಿದ್ದರೆ ಈ ಭಾಗದಿಂದ ಹೊರ ಹೋಗುವ ಕಬ್ಬು ತುಂಬಿದ ಲಾರಿಗಳನ್ನು ತಡೆದು ನಿರಂತರವಾಗಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಎಂ.ಬೆಟ್ಟಹಳ್ಳಿ ಮಂಜುನಾಥ್, ಕೆನ್ನಾಳು ವೇಣುಗೋಪಾಲ್, ಹಾರೋಹಳ್ಳಿ ದಳವಾಯಿಗೌಡ, ಯೋಗೀಶ್, ಕಾಂತರಾಜು, ಜಗದೀಶ್, ದೇವು, ಕಾರ್ಮಿಕ ಮುಖಂಡರಾದ ರಾಜಶೇಖರ್, ರಮೇಶ್ ಇದ್ದರು.