ಕೆ.ಆರ್.ಪೇಟೆ: ತಾಲ್ಲೂಕಿನ ವಿವಿಧೆಡೆ ವೈಕುಂಠ ಏಕಾದಶಿ ಅಂಗವಾಗಿ ವಿಷ್ಣು ದೇವಾಲಯ ಮತ್ತು ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ- ಪುನಸ್ಕಾರ, ಹೋಮ ಹವನ ಮತ್ತು ಅಭೀಷೇಕ ಶನಿವಾರ ನಡೆದವು.
ಪಟ್ಟಣದಲ್ಲಿ ತಾಲ್ಲೂಕು ಕಚೇರಿ ಸಮೀಪದ ಪ್ರಸಿದ್ಧ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯದಲ್ಲಿ ಆರಾದ್ಯ ದೇವತಾ ಮೂರ್ತಿಗಳಾದ ನಾರಾಯಣಸ್ವಾಮಿ, ಮಹಾಲಕ್ಷ್ಮಿ, ಮತ್ತು ಆಂಜನೇಯ ಸ್ವಾಮಿ ಶಿಲಾವಿಗ್ರಹಗಳಿಗೆ ಪೂಜೆ, ಅಭಿಷೇಕ ನಡೆದವು. ಪ್ರಧಾನ ಅರ್ಚಕರಾದ ನಾರಾಯಣಾಚಾರ್ಯ ನೇತೃತ್ವದಲ್ಲಿ ವಿವಿಧ ಬಗೆಯ ಪೂಜಾ ಕಾರ್ಯಗಳು, ಪಂಚಾಮೃತಾಭಿಷೇಕ ನಡೆಯಿತು.
ಹೇಮಗಿರಿ ರಸ್ತೆಯಲ್ಲಿ ಇರುವ ಮುತ್ತುರಾಯಸ್ವಾಮಿ ದೇವಾಲಯದಲ್ಲಿ ಏಕಾದಶಿ ಅಂಗವಾಗಿ ಶುಕ್ರವಾರದಿಂದಲೇ ಪೂಜಾ ಕಾರ್ಯಗಳು ಆರಂಭವಾಗಿತ್ತು. ನೂರಾರು ಮಂದಿ ಶನಿವಾರ ಬೆಳಿಗ್ಗೆಯಿಂದಲೇ ದೇವರ ದರ್ಶನ ಪಡೆದರು.
ಹೊಯ್ಸಳ ಕಲಾ ದೇವಾಲಯವಿರುವ ಹೊಸಹೊಳಲು ಗ್ರಾಮದ ಲಕ್ಷ್ಮೀ ನಾರಾಯಣ ಸ್ವಾಮಿ ದೇವಾಲಯದಲ್ಲಿ ನಂಬಿನಾರಾಯಣ ಮೂರ್ತಿಗೆ ಪೂಜೆ ಅಭೀಷೇಕ ನಡೆಯಿತು. ಭಕ್ತರು ಉತ್ತರ ಬಾಗಿಲ ಮೂಲಕ ವೈಕುಂಠ ಪ್ರವೇಶಿಸಿ ದೇವರ ದರ್ಶನ ಪಡೆದರು.
ಹೇಮಾವತಿ ನದಿ ದಂಡೆಯಲ್ಲಿ ಇರುವ ಪ್ರಸಿದ್ದ ಕ್ಷೇತ್ರವಾದ ಕಲ್ಲಹಳ್ಳಿಯಲ್ಲಿ ಭೂವರಾಹನಾಥ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಪ್ರಸಾದ , ಸಂತರ್ಪಣೆ ನಡೆದವು. ಶಾಸಕ ಎಚ್.ಟಿ ಮಂಜು ಪತ್ನಿಯೊಂದಿಗೆ ಭೇಟಿ ನೀಡಿ ದರ್ಶನ ಪಡೆದರು. ಅಂತೆಯೇ ಪ್ರಸಿದ್ದ ಯಾತ್ರಾಸ್ಥಳವಾದ ಹೇಮಗಿರಿಯಲ್ಲಿ ಬಿಜಿಎಸ್ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಕಲ್ಯಾಣ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಆಚರಿಸಲಾಯಿತು. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜೆ.ಎನ್.ರಾಮಕೃಷ್ಣೇಗೌಡ ಪೂಜೆ ಸಲ್ಲಿಸಿದರು.
ಅಗ್ರಹಾರ ಬಾಚಹಳ್ಳಿಯ ಚನ್ನಕೇಶ್ವದೇವಾಲಯ, ಸಿಂಧುಘಟ್ಟದ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ, ಶೀಳನೆರೆಯ ಅರೆಕಲ್ಲು ತಿಮ್ಮಪ್ಪ ದೇವಾಲಯ, ಸಂತೇಬಾಚಹಳ್ಳಿಯ ವೀರನಾರಾಯಣಸ್ವಾಮಿ, ಅಕ್ಕಿಹೆಬ್ಬಾಳಿನ ಲಕ್ಷ್ಮೀನರಸಿಂಹ ದೇವಾಲಯ, ಬೂಕನಕೆರೆಯ ವೆಂಕಟರಮಣಸ್ವಾಮಿ ದೇವಾಲಯ, ಬೆಟ್ಟದ ಹೊಸೂರಿನ ಉದ್ಭವಬೋಳಾರೆ ರಂಗನಾಥಸ್ವಾಮಿ ದೇವಾಲಯ ಸೇರಿದಂತೆ ಹಲವೆಡೆ ಸಡಗರ ಮತ್ತು ಭಕ್ತಿ ಶ್ರದ್ದೆಯಿಂದ ಆಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.