ಶ್ರೀರಂಗಪಟ್ಟಣ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ತಾಲ್ಲೂಕಿನ ಕಡತನಾಳು ಗ್ರಾಮಸ್ಥರು, ಭೂಮಿತಾಯಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಅಣಕು ನೇಣು ಚಳವಳಿ ನಡೆಸಿದರು.
ಪಟ್ಟಣದ ಕುವೆಂಪು ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಮುಖ್ಯ ಬೀದಿಯಲ್ಲಿ ಪ್ರೆತಿಭಟನಾ ಮೆರವಣಿಗೆ ನಡೆಯಿತು.
ಪ್ರತಿಭಟನಾಕಾರರು ಟ್ರ್ಯಾಕ್ಟರ್ನಲ್ಲಿ ಹಾಕಿದ್ದ ನೇಣು ಕುಣಿಕಿಗೆ ಕೊರಳೊಡ್ಡಿ ಸಾಗಿದರು. ಕೆಲವರು ಹೆಗಲ ಮೇಲೆ ಗುದ್ದಲಿ ಹೊತ್ತು ನಡೆದರು. ದಾರಿಯುದ್ದಕ್ಕೂ ರಾಜ್ಯ ಸರ್ಕಾರ, ತಮಿಳುನಾಡಿ ಸರ್ಕಾರ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದರು. ರೈತ ನಾಯಕ ಕೆ.ಎಸ್. ನಂಜುಂಡೇಗೌಡ ಅವರ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಎದುರು ಒಂದು ತಾಸಿಗೂ ಹೆಚ್ಚು ಕಾಲ ಪ್ರತಿಭಟನಾ ಧರಣಿ ನಡೆಯಿತು.
‘ರಾಜ್ಯದ ಜಲಾಶಯಗಳ ನೀರನ್ನು ಖಾಲಿ ಮಾಡುತ್ತಿರುವ ರಾಜ್ಯ ಸರ್ಕಾರ ಇಲ್ಲಿನ ರೈತರಿಗೆ ನೇಣಿನ ಭಾಗ್ಯ ಕೊಡಲು ಹೊರಟಿದೆ. ಇಂತಹ ಜನ ವಿರೋಧಿ ಸರ್ಕಾರ ದೇಶದಲ್ಲೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರ ಸೋಗಲಾಡಿತನ ಈಗ ಬಯಲಾಗಿದೆ. ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸದಿದ್ದರೆ ರಾಜಕಾರಣಿಗಳಿಗೆ ಘೇರಾವ್ ಹಾಕಲಾಗುವುದು’ ಎಂದು ಕೆ.ಎಸ್. ನಂಜುಂಡೇಗೌಡ ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಡತನಾಳು ಗ್ರಾಮದ ಗ್ರಾ.ಪಂ. ಸದಸ್ಯರಾದ ಶಿವಕುಮಾರ್, ಸುಜಯ್, ಮುಖಂಡರಾದ ಚಾಮರಾಜು, ನಾಗೇಗೌಡ, ಪೃಥ್ವಿರಾಜ್, ಉಮೇಶ್, ವಿಶ್ವನಾಥ್, ಸಾಗರ್, ಸಂಜಯ್, ಶಿವಣ್ಣ, ಶ್ರೀಧರ್; ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ, ಪ್ರಧಾನ ಕಾರ್ಯದರ್ಶಿ ಮಹದೇವಪುರ ಕೃಷ್ಣ, ದರ್ಶನ್, ಹನಿಯಂಬಾಡಿ ನಾಗರಾಜು, ಬಲ್ಲೇನಹಳ್ಳಿ ಮಂಜುನಾಥ್, ಕೆಂಪೇಗೌಡ, ಹೊಸೂರು ಶಿವರಾಜು, ಚಂದಗಾಲು ಶಿವಣ್ಣ, ಕೆ.ಶೆಟ್ಟಹಳ್ಳಿ ಮಹಲಿಂಗು, ಶಂಕರ್ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.