ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬಗಳಿಗೆ ತಲಾ ₹30 ಲಕ್ಷ ಪರಿಹಾರ

ಕೋವಿಡ್‌ನಿಂದ ಮೃತಪಟ್ಟ ಪಾಲಿಕೆಯ ಐವರು ಪೌರಕಾರ್ಮಿಕರು–ಅನುಕಂಪದ ನೌಕರಿಗೆ ಮನವಿ
Last Updated 24 ನವೆಂಬರ್ 2020, 3:23 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಕೋವಿಡ್‌ ವಾರಿಯರ್‌ ಗಳಾಗಿ ಕಾರ್ಯನಿರ್ವ ಹಿಸುತ್ತಿದ್ದ ಐವರು ಪೌರಕಾರ್ಮಿಕರು ಕೋವಿಡ್‌ 19ನಿಂದ ಮೃತರಾಗಿದ್ದು, ಇವರಲ್ಲಿ ಇಬ್ಬರು ಗುತ್ತಿಗೆ ಪೌರಕಾರ್ಮಿಕರ ಕುಟುಂಬಕ್ಕೆ ಪಾಲಿಕೆ ವತಿಯಿಂದ ಸೋಮವಾರ ತಲಾ ₹ 30 ಲಕ್ಷ ಪರಿಹಾರ ವಿತರಿಸಲಾಯಿತು.

ಪಾಲಿಕೆಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೇಯರ್‌ ತಸ್ನೀಂ ಹಾಗೂ ಆಯುಕ್ತ ಗುರುದತ್ತ ಹೆಗಡೆ ಚೆಕ್ಹಸ್ತಾಂತರಿಸಿದರು.

ಹೊರಗುತ್ತಿಗೆ ಪೌರಕಾರ್ಮಿಕರಾದ ಓಬಮ್ಮ ಹಾಗೂ ಶಶಿಕುಮಾರ್‌ ಅವರು ಪಾಲಿಕೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಸೋಂಕು ತಗುಲಿ ಮೃತಪಟ್ಟಿದ್ದರು.

‘ಪಾಲಿಕೆಯಲ್ಲಿ ಕಾರ್ಯನಿರ್ವ ಹಿಸುತ್ತಿರುವ ವಿವಿಧ ವಿಭಾಗಗಳ ಒಟ್ಟು 121 ನೌಕರರಿಗೆ ಸೋಂಕು ತಗುಲಿದ್ದು, ಐವರು ಮೃತಪಟ್ಟಿದ್ದಾರೆ. ಕಾಯಂ ನೌಕರರಾದ ಮಹದೇವ, ಎಸ್‌.ಜೆ.ಕೃಷ್ಣಮ್ಮ, ವಿ.ಬನ್ನಾರಿ ಇನ್ನುಳಿದ ಮೂವರು. ಇವರ ಕುಟುಂಬಕ್ಕೆ ಸದ್ಯದಲ್ಲೇ ಪರಿಹಾರ ವಿತರಿಸಲಾಗುವುದು’ ಎಂದು ಆಯುಕ್ತ ಗುರುದತ್ತ ಹೆಗಡೆ ತಿಳಿಸಿದರು.

‘ಇದಕ್ಕೆ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆಯಾಗಲಿದೆ. ಸದ್ಯಕ್ಕೆ ಪಾಲಿಕೆಯಿಂದಲೇ ಆ ಹಣ ಭರಿಸಿದ್ದೇವೆ’ ಎಂದರು.

ಅನುಕಂಪದ ನೌಕರಿಗೆ ಆಗ್ರಹ: ಅನುಕಂಪದ ಆಧಾರದ ಮೇಲೆ ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ನೌಕರಿ ನೀಡಬೇಕೆಂದು ಮೃತ ಪೌರಕಾರ್ಮಿಕರ ಸಂಬಂಧಿಕರು ಈ ಸಂದರ್ಭದಲ್ಲಿ ಮನವಿ ಮಾಡಿದರು. ಈವಿಚಾರವಾಗಿ ಪರಿಶೀಲನೆ ನಡೆಸುವುದಾಗಿ ಆಯುಕ್ತರು ಹೇಳಿದರು.

ತುಂಬಾ ಹೊತ್ತು ಕಾದರು: ಪರಿಹಾರ ವಿತರಣೆ ಕಾರ್ಯಕ್ರಮ ಬೆಳಿಗ್ಗೆ 11.30ಕ್ಕೆ ನಿಗದಿಯಾಗಿತ್ತು. ಪರಿಹಾರ ಪಡೆಯಲುಕುಟುಂಬದವರು11 ಗಂಟೆಗೆ ಬಂದಿದ್ದರು. ಆದರೆ, ಶಿಷ್ಟಾಚಾರ ವಿಚಾರವಾಗಿ ಮೇಯರ್‌ಹಾಗೂ ಅಧಿಕಾರಿಗಳ ತಿಕ್ಕಾಟದಿಂದ ಸುಮಾರು ಒಂದೂವರೆ ಗಂಟೆ ಕಾಯಬೇಕಾಯಿತು.

ಉಪ ಮೇಯರ್‌ ಶ್ರೀಧರ್‌, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಜೆ.ಗೋಪಿ ಇದ್ದರು.

‘ಮಕ್ಕಳ ಶಿಕ್ಷಣಕ್ಕೆ ಬಳಸುತ್ತೇವೆ’

ಪರಿಹಾರ ರೂಪದಲ್ಲಿ ಬಂದಿರುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿ ಸುತ್ತೇವೆ ಎಂದು ಓಬಮ್ಮ, ಶಶಿಕುಮಾರ್‌ ಕುಟುಂಬದವರು ತಿಳಿಸಿದರು.

ಕೋವಿಡ್‌ನಿಂದ ಜುಲೈನಲ್ಲಿ ಮೃತರಾದ ಶಶಿಕುಮಾರ್‌ (40), ಕಸ ಸಾಗಿಸುವ ವಾಹನ ಚಾಲಕರಾಗಿದ್ದರು. ಪರಿಹಾರ ಮೊತ್ತ ಪಡೆಯಲು ಅವರ ಪತ್ನಿ ಲಕ್ಷ್ಮೀದೇವಿ ಬಂದಿದ್ದರು. ಇಬ್ಬರಿಬ್ಬರ ಪುಟ್ಟ ಮಕ್ಕಳು ಹಾಗೂ ಶಶಿಕುಮಾರ್ ತಂದೆ ನಾಗರಾಜು ಇದ್ದರು.

‘ಪರಿಹಾರದ ಮೊತ್ತವನ್ನು ಮಕ್ಕಳ ಶಿಕ್ಷಣಕ್ಕೆ ಬಳಸುತ್ತೇನೆ. ಅನುಕಂಪದ ಆಧಾರದ ಮೇಲೆ ನೌಕರಿ ಕೊಡಿ ಎಂದು ಕೇಳಿದ್ದೇನೆ’ ಎಂದು ಲಕ್ಷ್ಮೀದೇವಿ ಹೇಳಿದರು.

ಸೋಂಕಿನಿಂದ ಆಗಸ್ಟ್‌ನಲ್ಲಿ ಮೃತರಾದ ಓಬಮ್ಮ (53) ಅವರು 14 ವರ್ಷಗಳಿಂದ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಪರಿಹಾರ ಮೊತ್ತ ಪಡೆಯಲು ಅವರ ಪತಿ ಲಕ್ಷ್ಮಣ, ಮಗಳು ಲಕ್ಷ್ಮಿ, ಪುತ್ರ ಮಹೇಶ್‌ ಬಂದಿದ್ದರು.

‘ಕಷ್ಟಕಾಲದಲ್ಲಿ ಹಣ ಸಿಕ್ಕಿದ್ದು ಸಮಾಧಾನ ತಂದಿದೆ. ಈ ಹಣವನ್ನು ಮೊಮ್ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತೇನೆ’ ಎಂದು ಮಂಡಿ ಮೊಹಲ್ಲಾ ನಿವಾಸಿ ಲಕ್ಷ್ಮಣ್‌ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT