ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಗಜಪಡೆಗೆ ಭಾರಹೊರಿಸುವತಾಲೀಮು ಆರಂಭ ವಾಗಿದ್ದು, ಗುರುವಾರ ಕ್ಯಾಪ್ಟನ್ ಅಭಿಮನ್ಯು ಆನೆ ಸುಮಾರು 350 ಕೆ.ಜಿ ಭಾರ ಹೊತ್ತು ಸಾಗಿತು.
ಕೋವಿಡ್ ಪರಿಸ್ಥಿತಿ ಕಾರಣ ಅರಮನೆ ಆವರಣದಲ್ಲೇ ತಾಲೀಮು ನಡೆಯುತ್ತಿದ್ದು, ಬೆಳಿಗ್ಗೆ ಐದೂ ಆನೆಗಳು ಎರಡು ಸುತ್ತು ಬಂದವು. ಸುಮಾರು ಮೂರು ಕಿ.ಮೀ ಹೆಜ್ಜೆ ಹಾಕಿದವು. ವಿಕ್ರಮ, ಗೋಪಿ, ವಿಜಯಾ, ಕಾವೇರಿ ತಾಲೀಮಿನಲ್ಲಿ ಭಾಗಿಯಾಗಿದ್ದ ಇತರ ಆನೆಗಳು.
54 ವರ್ಷದ ಅಭಿಮನ್ಯು ಇದೇ ಮೊದಲ ಬಾರಿ ಅಂಬಾರಿ ಹೊರಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ಮರಳು ಮೂಟೆಹೊರಿಸಿತಾಲೀಮು ನಡೆಸಲಾ ಗುತ್ತಿದೆ. ಅ.26ರಂದುನಾಡದೇವತೆ ಚಾಮುಂಡೇಶ್ವರಿ ತಾಯಿ ವಿರಾಜಮಾ ನವಾಗಿರುವ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿದೆ.
‘ಪ್ರತಿ ದಿನ ಬೆಳಿಗ್ಗೆ ಆನೆಗಳ ಮೇಲೆ ಭಾರ ಹೊರಿಸಲಾಗುವುದು. ಸಂಜೆ ಬರಿಮೈಯಲ್ಲಿ ತಾಲೀಮು ನಡೆಸಲಾಗುತ್ತದೆ. ಅಭಿಮನ್ಯುವಿಗೆ ದಿನ ಬಿಟ್ಟು ದಿನ ಭಾರ ಹೊರಿಸುವ ತಾಲೀಮು ನಡೆಸಲಾಗುತ್ತಿದ್ದು, ತೂಕ ಹೆಚ್ಚಿಸುತ್ತಾ ಹೋಗುತ್ತೇವೆ. ಒಂದು ದಿನ ಗೋಪಿಗೆ ಭಾರ ಹೊರಿಸಿ ತಾಲೀಮು ನಡೆಸಲಾಗುವುದು’ ಎಂದು ಅರಣ್ಯ ಇಲಾಖೆ ಪಶುವೈದ್ಯ ಡಾ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಸೋಂಕು ನಿಯಂತ್ರಣ ನಿಟ್ಟಿ ನಲ್ಲಿ ಗಜಪಡೆಯ ಮಾವುತರು ಹಾಗೂ ಕಾವಾಡಿಗಳು ಅರಮನೆ ಆವರಣದಾ ಚೆಗೆ ಕಾಲಿಡುವಂತಿಲ್ಲ. ಹೊರಗಿನ ಜನರ ಸಂಪರ್ಕ ಮಾಡುವಂತಿಲ್ಲ. ಇವರೆಲ್ಲರಿಗೂ ಈಚೆಗೆ ಕೋವಿಡ್ ಪರೀಕ್ಷೆ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿತ್ತು.
ಪ್ರತಿ ವರ್ಷದ ದಸರಾ ವೇಳೆ ಅರಮನೆಯಿಂದ ಹೊರಡುತ್ತಿದ್ದ ಗಜಪಡೆ, ಸಾಲು ಸಾಲಾಗಿ ನಗರದ ರಾಜಬೀದಿಗಳಲ್ಲಿ ಸಾಗಿ ಬನ್ನಿಮಂಟಪ ತಲುಪಿ ವಾಪಸ್ ಬರುತಿತ್ತು. ದಾರಿಯುದ್ದಕ್ಕೂ ಜನ ಆ ಸೊಬಗು ಕಣ್ತುಂಬಿಕೊಳ್ಳುತ್ತಿದ್ದರು. ಕೋವಿಡ್ ಆತಂಕ ಕಾರಣ ಈ ಬಾರಿ ಅರಮನೆಗೆ ಸೀಮಿತಗೊಳಿಸಲಾಗಿದೆ.
ಎರಡು ಸುತ್ತು ತಾಲೀಮು ನಡೆಸಿದ ನಂತರ, ಗಜಪಡೆಗೆ ಪೌಷ್ಟಿಕಾಂಶವಿರುವ ವಿಶೇಷ ಆಹಾರ ನೀಡಲಾಯಿತು. ಮಾವುತರು ಹಾಗೂ ಕಾವಾಡಿಗರು ಆನೆಗಳಿಗೆ ಸ್ನಾನ ಮಾಡಿಸಿದರು. ಕೋವಿಡ್ ಆತಂಕ ಇರುವ ಕಾರಣ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.